ಮಂಗಳೂರು: ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿ ನಗರದ ಕದ್ರಿ ಪಾರ್ಕ್ ಬಳಿ ಹಾಗೂ ನಂದಿ ಗುಡ್ಡೆಯಲ್ಲಿ ರುಂಡ, ದೇಹದ ವಿವಿಧ ಭಾಗಗಳನ್ನು ಎಸೆದು ಹೋಗಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ಕದ್ರಿ ಪಾರ್ಕ್ನ ಹಿಂಬದಿಯಲ್ಲಿರುವ ಅಂಗಡಿಯ ಬಳಿ ಹೆಲ್ಮೆಟ್ ಇರಿಸಿ ಹೋಗಿದ್ದ. ಬಳಿಕ ಅಂಗಡಿಯ ಮಾಲೀಕ ಪರಿಶೀಲಿಸಿದಾಗ ಸಮೀಪದಲ್ಲೇ ಗೋಣಿ ಚೀಲದಲ್ಲಿ ಮಹಿಳೆಯ ಬೇರ್ಪಟ್ಟ ರುಂಡವೊಂದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.
ಅಲ್ಲದೆ ನಂದಿಗುಡ್ಡ ಹಿಂದೂ ರುದ್ರಭೂಮಿಯ ಸಮೀಪ ದೇಹದ ಇತರ ಭಾಗಗಳು ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಪೊಲೀಸರು ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.