ಮಂಗಳೂರು: ಕೋವಿಡ್ ಲಸಿಕೆ ಹಾಕಿಸಿಕೊಂಡಾತನ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಇರುವ ವಿಡಿಯೋಗಳು ವೈರಲ್ ಆಗಿದ್ದವು. ಆದರೆ ಇದೆಲ್ಲವೂ ಬರೀ ಬೋಗಸ್, ನಮ್ಮ ದೇಹದಲ್ಲಿ ಅಯಸ್ಕಾಂತೀಯ ಗುಣ ಇರುವುದಿಲ್ಲ. ಇದೆಲ್ಲಾ ಅಪಪ್ರಚಾರವಷ್ಟೇ ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದ್ದಾರೆ.
ಲೋಹದಂತಹ ವಸ್ತುಗಳು ಅಂಟಿಕೊಳ್ಳುತ್ತವೆ ಎಂದು ಪ್ರಚಾರ ಮಾಡುವವರು ಮೊದಲಾಗಿ ಮೈಗೆ ಸ್ಯಾನಿಟೈಸರ್ ಹಾಕಿಕೊಂಡು ದೇಹ ಒಣಗಿದ ಬಳಿಕವೂ ಆ ಲೋಹವನ್ನು ಅಂಟಿಸುವಂತಹ ಸಾಮರ್ಥ್ಯ ತೋರಿದಲ್ಲಿ ಅವರಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ ಪ್ರೊಫೆಸರ್ ನಾಯಕ್ ಸವಾಲು ಹಾಕಿದ್ದಾರೆ.
ಮೈಗೆ ಲೋಹದಂತಹ ವಸ್ತುಗಳು ಕೇವಲ ಚರ್ಮದ ಮೇಲಿನ ತೇವಾಂಶವು ದೇಹದ ಮೇಲ್ಮೈ ಸೆಳೆತದಿಂದ ಮಾತ್ರ ಅಂಟಿಕೊಳ್ಳುತ್ತದೆ ವಿನಃ ಮೈಯಲ್ಲಿ ಯಾವುದೇ ರೀತಿಯಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗುವುದಿಲ್ಲ ಎಂದಿದ್ದಾರೆ.
ದೇಹದಲ್ಲಿ ಕಾಂತೀಯ ಗುಣ ಎಂಬುದು ಮೂರ್ಖತನ:
ಇತ್ತೀಚಿಗೆ ಉಡುಪಿಯ ವ್ಯಕ್ತಿಯೋರ್ವರಿಗೆ ಲಸಿಕೆ ಪಡೆದ ಬಳಿಕ ಮೈಯಲ್ಲಿ ಅಯಸ್ಕಾಂತೀಯ ಗುಣ ಉಂಟಾಗಿದೆ ಎಂದು ಹೇಳಿ ಪ್ರಚಾರ ಮಾಡಿದವರು ಕಡಿಮೆ ತೂಕದ ಲೋಹದ ವಸ್ತುಗಳನ್ನು ಮೈಗೆ ಅಂಟಿಸಿದ್ದಾರೆ. ಆದರೆ ಲೋಹ ಅಂದಾಕ್ಷಣ ಅದರಲ್ಲಿ ಕಾಂತತ್ವ(magnetic) ಇರಬೇಕೆಂದೇನು ಇಲ್ಲ. ಆದರೆ ಆ ವ್ಯಕ್ತಿಯು ತನ್ನ ಮೈಗೆ ಅಂಟಿಸಿಕೊಂಡಿರೋದು ಕಾಂತೀಯ ಗುಣವುಳ್ಳ ಲೋಹವೇ ಎಂದು ಪರಿಶೀಲನೆ ನಡೆಸದೆಯೇ ಮೈಗೆ ಅಂಟಿಸಿಕೊಂಡಿದ್ದಾರೆ. ಆದರೆ ಆತನ ಮೇಲ್ಮೈ ಸೆಳೆತಕ್ಕೆ ಒಳಗಾಗಿ ಲೋಹ ಅಂಟಿಕೊಂಡಿದೆಯೇ ಹೊರತು, ಲಸಿಕೆ ಪಡೆದ ಬಳಿಕ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉದ್ಭವವಾಗಿದೆ ಅನ್ನುವುದು ಮೂರ್ಖತನ ಎಂದು ಪ್ರೊ. ನರೇಂದ್ರ ನಾಯಕ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಜನರು ಲಸಿಕೆ ಪಡೆಯದಂತೆ ಮಾಡುವ ಹುನ್ನಾರ ನಡೆಯುತ್ತಿದ್ದು, ಇದಕ್ಕಾಗಿ ಬಹಳಷ್ಟು ದಾರಿತಪ್ಪಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಹಿಂಜರಿಕೆ ಉಂಟಾಗುತ್ತದೆ. ಜನರಲ್ಲಿ ಇಂತಹ ಭಯ, ಗೊಂದಲಗಳನ್ನು ಉಂಟು ಮಾಡುವುದನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಓದಿ: ಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!