ಬೆಳ್ತಂಗಡಿ(ದ.ಕ): ಪ್ರಯಾಣಿಕರ ತಂಗುದಾಣಗಳೆಂದರೆ ಮೂಗು ಮುಚ್ಚಿ ಯಾವಾಗ ಒಮ್ಮೆ ಇಲ್ಲಿಂದ ಹೋಗಲಿಲ್ಲ, ಯಾವಾಗ ಬಸ್ಸು ಬರಲಿಲ್ಲ ಎಂದು ಜನ ಚಡಪಡಿಸುವ ರೀತಿಯಲ್ಲಿ ಅಲ್ಲಲ್ಲಿ ಕಸ ಕಡ್ಡಿಗಳು, ಬೀಡಿ ಸಿಗರೇಟ್, ಪ್ಲಾಸ್ಟಿಕ್ಗಳ ರಾಶಿ, ಪಾನ್ ಬೀಡಾ ತಿಂದು ಉಗಿದಿರುವ ಗೋಡೆಗಳು ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಇರುತ್ತವೆ. ಸರಿಯಾದ ನಿರ್ವಹಣೆ ಇಲ್ಲದೆ ಪ್ರಯಾಣಿಕರು ನಿಲ್ಲಲು ಆಗದ ರೀತಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಅವ್ಯವಸ್ಥೆ ಇರುತ್ತದೆ. ಆದರೆ ಇಲ್ಲೊಂದು ಪ್ರಯಾಣಿಕರ ತಂಗುದಾಣ ಮಾತ್ರ ವಿಭಿನ್ನವಾಗಿದೆ.
ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಪ್ರಯಾಣಿಕರ ತಂಗುದಾಣವನ್ನು ರಿಕ್ಷಾ ಚಾಲಕ ಮಾಲಕರು, ಸ್ಥಳೀಯರು ಸೇರಿ ವಿಶೇಷ ರೀತಿಯಲ್ಲಿ ಜನರಿಗಾಗಿ ಸಿದ್ಧಗೊಳಿಸಿದ್ದಾರೆ. ತಂಗುದಾಣಕ್ಕೆ ಬಣ್ಣ ಬಳಿದು ಗೋಡೆಗಳಲ್ಲಿ ಸಮಾಜಕ್ಕೆ ಸಂದೇಶ ಸಾರುವಂತಹ ಭಿತ್ತಿ ಚಿತ್ರಗಳು, ಸಾಮರಸ್ಯ ಸಾರುವಂತಹ ಚಿತ್ರಗಳು, ಜಾಗೃತಿ ಬರಹಗಳು, ಕುಡಿಯುವ ನೀರು, ಕಸ ಹಾಕಲು ಕಸದ ಬುಟ್ಟಿ ಎಲ್ಲಾ ವ್ಯವಸ್ಥೆಯನ್ನು ಮಾಡಿ ಮಾದರಿ ತಂಗುದಾಣವನ್ನು ನಿರ್ಮಿಸಿ ಇತರರಿಗೂ ಮಾದರಿಯಾಗಿದ್ದಾರೆ.
ಇಲ್ಲಿ ಬಂದು ಕುಳಿತುಕೊಂಡರೆ ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಕುಳಿತುಕೊಳ್ಳಬೇಕು ಎಂದು ಮನಸ್ಸಾಗುತ್ತಿದೆ. ಸರ್ಕಾರದ ಜವಾಬ್ದಾರಿ ಸರ್ಕಾರ ಮಾಡಲಿ ಎಂದು ಕುಳಿತುಕೊಳ್ಳದೆ ಸಾರ್ವಜನಿಕರು ಸೇರಿ ಸಹಕರಿಸಿದರೆ ಎಲ್ಲಾ ಕಡೆಗಳಲ್ಲಿ ಇದೇ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ನಿಜವಾಗಲೂ ಈ ತಂಗುದಾಣವನ್ನು ಇಷ್ಟೊಂದು ಒಳ್ಳೆಯ ರೀತಿಯಲ್ಲಿ ಸಿದ್ಧಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಗುರುವಾಯನಕೆರೆ ಈ ಪ್ರಯಾಣಿಕರ ವಿಶ್ರಾಂತಿ ಗೃಹ ಎಲ್ಲರಿಗೂ ಮಾದರಿಯಾಗಲಿ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಇದೀಗ ಈ ಪ್ರಯಾಣಿಕರ ವಿಶ್ರಾಂತಿ ಗೃಹ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.