ಮಂಗಳೂರು: ಇಂದು ಜನರು ಧೈರ್ಯದಿಂದ ಬಂದು ಲಸಿಕೆ ಪಡೆಯುತ್ತಿಲ್ಲ. ಬದಲಾಗಿ ಏನಾದರೂ ಆಗುತ್ತದೆ ಎಂಬ ಭಯದಿಂದ ಲಸಿಕೆ ಪಡೆಯುವಂತೆ ಆಡಳಿತ ನಡೆಸುತ್ತಿರುವ ಸರ್ಕಾರ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬೇರೆಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕರು, ಸಚಿವರು ಮಾಡಿದರೆ, ಲಸಿಕೆ ನೀಡುವ ಕಾರ್ಯಕ್ರಮದ ಉದ್ಘಾಟನೆಯನ್ನು 'ಡಿ' ಗ್ರೂಪ್ ನೌಕರರಿಂದ ಮಾಡಿಸಲಾಗಿದೆ. ಮಂತ್ರಿಗಳು, ಶಾಸಕರು, ಪ್ರಧಾನಮಂತ್ರಿಗಳು, ವೈದ್ಯಕೀಯ ಕ್ಷೇತ್ರದ ನುರಿತರು ಲಸಿಕೆ ಮೊದಲೇ ಪಡೆದುಕೊಂಡಿದ್ದರೆ ಜನರು ಸಹ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದರು. ಲಸಿಕೆ ಪಡೆಯಲು ಜನರು ಹಿಂಜರಿಯಲು ಆಡಳಿತ ನಡೆಸುವ ಸರ್ಕಾರವೇ ಕಾರಣ ಎಂದು ಹೇಳಿದರು.
ಈಗ ರೋಗ ಬರೋದು ಬೇಡ ಎಂಬ ಕಾರಣಕ್ಕಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ ಈಗ ಲಸಿಕೆಯಿಲ್ಲ. 22 ದೇಶಗಳಲ್ಲಿ ಲಸಿಕೆ ತಯಾರಾಗುತ್ತಿದೆ. ಆದರೆ ಯಾರನ್ನೂ ಮಾರ್ಕೆಟಿಂಗ್ ಮಾಡಲು ದೇಶದೊಳಗೆ ಬರಲು ಬಿಜೆಪಿಗರು ಬಿಡಲಿಲ್ಲ. ನಮ್ಮ ದೇಶದಲ್ಲಿ ತಯಾರಾಗುವ ಲಸಿಕೆಯನ್ನು ಬೇರೆಡೆಗೆ ಕಳುಹಿಸಲಾಯಿತು. ಹಾಗಾಗಿ ಇದರ ಹೊಣೆಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹೊರಬೇಕು.
ನಮ್ಮಲ್ಲಿ ಲಸಿಕೆ ತಯಾರಿ ಮಾಡಿದ ಒಂದು ಸಂಸ್ಥೆಯು ಆಡಳಿತ ನಡೆಸುವ ಸರ್ಕಾರದ ಒತ್ತಡದಿಂದ ದೇಶ ಬಿಟ್ಟು ಓಡಿ ಇಂಗ್ಲೆಂಡ್ನಲ್ಲಿ ಲಸಿಕೆ ತಯಾರಿಕಾ ಕಂಪನಿ ಆರಂಭಿಸಿದೆ. ಇದು ನಮ್ಮ ದೇಶಕ್ಕೆ ಅವಮಾನ. ಕಾಂಗ್ರೆಸ್ಅನ್ನು ಟೀಕೆ ಮಾಡಿ ಇರಲು ಸಾಧ್ಯವಿಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಹೊಡೆತಕ್ಕೆ ಸೋಂಕು ನಿವಾರಕ ಔಷಧಗಳ ಬೆಲೆಯಲ್ಲಿ ಹೆಚ್ಚಳ
ಓರ್ವನ ಅಹಂಕಾರ, ಬದ್ಧತೆ ಇಲ್ಲದ, ನಿರ್ಲಕ್ಷ್ಯತನದ ಮನೋಭಾವದಿಂದ ಒಂದು ದೇಶ ಹೇಗೆ ಬಲಿಯಾಗುತ್ತದೆ ಎಂದು ಇತಿಹಾಸದಲ್ಲಿ ಬರೆಯುವಂತಹ ಘಟನೆಗಳೇನಾದರೂ ಇದ್ದಲ್ಲಿ ಅದು ಬಿಜೆಪಿಯ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಆಡಳಿತ ಆಗಿದೆ. ದೇಶದ ಇತಿಹಾಸದ ಪುಟದಲ್ಲಿ ಬರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಮಾಜಿ ಪ್ರಧಾನಿಯವರು 15 ಅಂಶಗಳು ಇರುವ ಪತ್ರವೊಂದನ್ನು ಬರೆದು ಸಲಹೆ ನೀಡಿದ್ದರು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆ ಸಲಹೆಯನ್ನು ಸ್ವೀಕರಿಸಲೇ ಇಲ್ಲ. ಕಾಂಗ್ರೆಸ್ ನೀಡಿರುವ ಈ ಸಲಹೆಯನ್ನು ಸ್ವೀಕರಿಸದ ಕಾರಣ ದೇಶದ ಪರಿಸ್ಥಿತಿಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ಎಲ್ಲ ಹದಗೆಟ್ಟ ಬಳಿಕ ಈಗ ಸಲಹೆ ಕೇಳಿ ಪ್ರಯೋಜನವೇನು ಎಂದು ಖಾದರ್ ಹೇಳಿದರು.