ಮಂಗಳೂರು: ನಗರದಲ್ಲಿ ಎರಡು ದಿನಗಳ ಕಾಲ ನಡೆದ ಹಲಸಿನ ಮೇಳಕ್ಕೆ ವ್ಯಾಪಾರ ಮಾಡಲು ಆಗಮಿಸಿದ ಇಬ್ಬರು ವ್ಯಾಪಾರಿಗಳು ಪಣಂಬೂರು ಬೀಚ್ನಲ್ಲಿ ಸಮುದ್ರಪಾಲಾದ ಘಟನೆ ಸಂಭವಿಸಿದೆ. ಮೈಸೂರು ಜಿಲ್ಲೆಯ ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ(40) ಹಾಗೂ ನಿಂಗಪ್ಪ (65) ಸಾವನ್ನಪ್ಪಿದವರು.
ಮೈಸೂರಿನ ಅಗ್ರಹಾರದಲ್ಲಿರುವ ಫುಡ್ ಆ್ಯಂಡ್ ಬೇವರೇಜಸ್ ಫ್ಯಾಕ್ಟರಿ ನಡೆಸುತ್ತಿದ್ದ ದಿವಾಕರ ಆರಾಧ್ಯ ಎಂಬುವರು ಇತರರೊಂದಿಗೆ ಮಂಗಳೂರು ನಗರದಲ್ಲಿ ಮೇ 27ರಿಂದ 29ವರೆಗೆ ನಡೆದ ಹಲಸು ಮೇಳದಲ್ಲಿ ಭಾಗವಹಿಸಲು ಬಂದಿದ್ದರು. ನಿನ್ನೆ ಸಂಜೆಯವರೆಗೆ ಹಲಸು ಮೇಳದಲ್ಲಿ ವ್ಯಾಪಾರ ಮಾಡಿದ್ದ ಇವರು ಇಂದು (ಸೋಮವಾರ) ಮುಂಜಾನೆ 7 ಗಂಟೆಗೆ ಪಣಂಬೂರು ಬೀಚ್ಗೆ ತೆರಳಿದ್ದರು. ಇವರೆಲ್ಲರೂ ಸಮುದ್ರದಲ್ಲಿ ಮೋಜು ಮಾಡುವ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ಆಗ ದಿವಾಕರ ಆರಾಧ್ಯ(40) ಹಾಗೂ ನಿಂಗಪ್ಪ (65) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇತರ ಇಬ್ಬರನ್ನು ರಕ್ಷಿಸಲಾಗಿದೆ.
ಶನಿವಾರ ಉಳ್ಳಾಲ ಬೀಚ್ನಲ್ಲಿ ಮೈಸೂರು ಮೂಲದ ಮಹಿಳೆಯೋರ್ವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಅಮಾನವೀಯ ಘಟನೆ.. ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಕಿಡಿಗೇಡಿ..