ಮಂಗಳೂರು (ದ.ಕ): ಅಪ್ರಾಪ್ತನೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ನೂರಾನಿ ಯತೀಂಖಾನ್ ಮಕ್ಕಳ ಕೇಂದ್ರದ ಮೇಲ್ವಿಚಾರಕನನ್ನು ಬಂಧಿಸಲಾಗಿದೆ.
ಈ ಕುರಿತು ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮೂಲತಃ ಕೊಣಾಜೆಯ ಹಾಗೂ ಕುಂಪಲ ನೂರಾನಿ ಯತೀಂಖಾನ್ ಮಕ್ಕಳ ಕೇಂದ್ರದ ಮೇಲ್ವಿಚಾರಕ ಆಯ್ಯೂಬ್ (52) ಬಂಧಿತ ಆರೋಪಿಯಾಗಿದ್ದಾನೆ. ಬಾಲಕನ ತಂದೆ ಮೃತಪಟ್ಟಿದ್ದು, ತಾಯಿ ಮಾತ್ರ ಇದ್ದಾರೆ. ಕಳೆದ 4 ವರ್ಷಗಳಿಂದ ಕುಂಪಲದ ನೂರಾನಿ ಯತೀಂಖಾನ್ ಮಕ್ಕಳ ಕೇಂದ್ರದಲ್ಲಿದ್ದು, ವಿದ್ಯಾಭ್ಯಾಸ ಪಡೆಯುತ್ತಿದ್ದಾನೆ. ಸುಮಾರು 2 ತಿಂಗಳಿನಿಂದ ಈ ಬಾಲಕನಿಗೆ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಇದೇ ರೀತಿ ಇನ್ನೂ 4 ಮಕ್ಕಳಿಗೆ ತೊಂದರೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡಸಲಾಗುತ್ತಿದೆ. ಆರೋಪಿಯನ್ನು ನಿನ್ನೆ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಪ್ರಕರಣದ ಗಂಭೀರತೆ ಪರಿಗಣಿಸಿ ಮಂಗಳೂರು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಂ ಶಂಕರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ತನಿಖೆ ನಡೆಸಲಾಗುತ್ತಿದೆ.
ಕಿರಾತಕನ ಕುರಿತು ಇನ್ನಷ್ಟು ವಿಚಾರಣೆ
ನೂರಾನಿ ಯತೀಂಖಾನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ದಾರುಲ್ ಮಸ್ಕಿ ನಗರದ ಕುಂಪಲದಲ್ಲಿದ್ದು, ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ಇದರಲ್ಲಿ 79 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಇನ್ನೂ ನಾಲ್ಕೈದು ಮಕ್ಕಳಿಗೆ ಆರೋಪಿ ಇದೇ ರೀತಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಮಾರ್ಚ್ 28ರಂದು ಪೊಲೀಸ್ ಇಲಾಖೆ, ಕೆ.ಎಸ್.ಹೆಗ್ಡೆ ಆಸ್ಪತ್ರೆ, ಚೈಲ್ಡ್ ವೆಲ್ಫೇರ್ ಕಮಿಟಿ ಜಂಟಿಯಾಗಿ ನಗರದ ಟಿಎಂಎಪೈ ಸಭಾಂಗಣದಲ್ಲಿ ನಗರದ 30ಕ್ಕೂ ಅಧಿಕ ಮಕ್ಕಳ ಪಾಲನಾ ಕೇಂದ್ರ, ಚೈಲ್ಡ್ ಕೇರ್ ಸೆಂಟರ್ನ ಮಕ್ಕಳಿಗೆ ಆಪ್ತ ಸಮಾಲೋಚನಾ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿ ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ದೌರ್ಜನ್ಯಗಳಾಗಿವೆಯೇ ಎಂದು ನುರಿತ ವೈದ್ಯರ ತಂಡದಿಂದ ತಪಾಸಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಿಂದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇನ್ನೂ ಸುಮಾರು 20 ಪ್ರಕರಣಗಳಲ್ಲಿ ಮಕ್ಕಳಿಗೆ ಗದರಿಸೋದು, ಹೊಡಿಯುವುದು, ಕೆಲಸ ಮಾಡಿಸೋದು ಬೆಳಕಿಗೆ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಕಳ್ಳತನಕ್ಕೆಂದು ಬಂದು ಕಣ್ಣಿಗೆ ಬಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು