ಬಂಟ್ವಾಳ: ದ್ವಿಚಕ್ರ ವಾಹನ ಹೊರತುಪಡಿಸಿ ಖಾಸಗಿ ವಾಹನಗಳ ಪ್ರವೇಶವಿಲ್ಲ ಎಂಬ ಸೂಚನೆಯ ಹೊರತಾಗಿಯೂ ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ವಾಹನಗಳು ಯಥಾ ಪ್ರಕಾರ ಸಂಚರಿಸುತ್ತಿದ್ದವು. ಸಂತೆ ರೀತಿಯ ವ್ಯಾಪಾರವೂ ನಡೆಯುತ್ತಿತ್ತು. ಜನರ ಬೇಜವಾಬ್ದಾರಿ ಕಂಡ ಪೊಲೀಸರು ಖಡಕ್ ಆದ ಪರಿಣಾಮ, ಬಿ.ಸಿ.ರೋಡಿನ ಕೈಕಂಬ, ಮೇಲ್ಕಾರ್, ಕಲ್ಲಡ್ಕ ಸಹಿತ ಆಯಕಟ್ಟಿನ ಪ್ರದೇಶಗಳಲ್ಲಿ ಸಂತೆ ವ್ಯಾಪಾರ, ಅನಗತ್ಯ ವಾಹನ ಸಂಚಾರಕ್ಕೆ ಇದೀಗ ಬ್ರೇಕ್ ಬಿದ್ದಿದೆ.
ನಿಗದಿತ ಅಂಗಡಿಗಳಲ್ಲದೆ ಇತರೆ ಅಂಗಡಿಗಳೂ ತೆರೆದಿರುವುದನ್ನು ಕಂಡು ಅವುಗಳನ್ನು ಮುಚ್ಚಿದರು. ಕೆಲವರು ಬೆಳ್ಳಂಬೆಳಗ್ಗೆ ಪೊಲೀಸರು ಬರುವುದಿಲ್ಲ ಎಂದು ಸುತ್ತಾಡಲು ಹೊರಟರು. ಇಂತಹ ಜನರ ಬೆನ್ನು ಬಿದ್ದ ಪೊಲೀಸರು ಕೋವಿಡ್-19 ನ ಪರಿಣಾಮದ ಕುರಿತು ಬುದ್ಧಿವಾದ ಹೇಳಿ, ಮನೆಯೊಳಗಿರುವಂತೆ ಖಡಕ್ ಆಗಿ ಸೂಚನೆ ಕೊಟ್ಟರು.
ಇನ್ನೊಂದೆಡೆ, ಹಳ್ಳಿ ಪ್ರದೇಶಗಳಿಂದ ಹಾಲಿಗಾಗಿ 3-4 ಕಿಲೋ ಮೀಟರ್ ದೂರ ನಡೆದುಕೊಂಡು ಬರುವವರು, ಡೈರಿಗಳಿಗೆ ಹಾಲು ತೆಗೆದುಕೊಂಡು ಬರುವ ಜನರಿಗೂ ತೊಂದರೆಯಾಯಿತು.