ಮಂಗಳೂರು : ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸ ಅನುಭವಿಸಿದ್ದ ಮತ್ತು ಮಂಗಳೂರು ನಗರಸಭಾ ಸದಸ್ಯೆಯಾಗಿದ್ದ ಶಾರದಾ ಆಚಾರ್ (89) ನಿಧನರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಅವರು ಶನಿವಾರ ಬೆಳಗ್ಗೆ 10:30ಕ್ಕೆ ದೈವಾಧೀನರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರದ ಸಹ ಸಂಘಚಾಲಕ ಸುನಿಲ್ ಆಚಾರ್ಯರ ಮಾತೃಶ್ರೀಯಾಗಿರುವ ಇವರು, ಜನ ಸಂಘದ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರಾಗಿದ್ದರು. 3 ಅವಧಿಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿದ್ದು, 9 ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ಧ ಇವರು, ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಕೌಟ್ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿರಿ ತೋಟಗಾರಿಕಾ ಸಂಘದ ಖಜಾಂಚಿಯಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಶಾರದಾ ಆಚಾರ್ಯ ನಿಧನಕ್ಕೆ ಕಟೀಲ್ ಸಂತಾಪ:
ಬೆಂಗಳೂರು : ಜನಸಂಘದ ಹಿರಿಯ ಧುರೀಣರಾದ ಶ್ರೀಮತಿ ಶಾರದಾ ಆಚಾರ್ಯ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾರದಾ ಆಚಾರ್ಯ ಅವರ ಕುಟುಂಬ ಮತ್ತು ಬಂಧು ವರ್ಗಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.