ಉಳ್ಳಾಲ: ಪರಿಸ್ಥಿತಿ ಗಂಭೀರವಾಗಿದೆ, ಯಾವುದನ್ನೂ ಲಘುವಾಗಿ ತೆಗೆದುಕೊಳ್ಳದಿರಿ. ಜಾಗೃತಿ ಇದ್ದಷ್ಟು ಎಲ್ಲರಿಗೂ ಒಳ್ಳೆಯದು. ನಿಮ್ಮಲ್ಲಿ ಅಥವಾ ನೆರೆಹೊರೆಯವರಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಶಾ ಕಾರ್ಯಕರ್ತೆಯರ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಶಾಸಕ ಯು.ಟಿ.ಖಾದರ್ ಕಿವಿಮಾತು ಹೇಳಿದ್ದಾರೆ.
ಮುಡಿಪು ಭಾಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಜನಪ್ರತಿನಿಧಿಗಳ ಜೊತೆಗೆ ಇಂದು ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸುವ ಜನಜಾಗೃತಿಯನ್ನು ಕಾರ್ಯಪಡೆ ಮಾಡಬೇಕಿದೆ. ಪ್ರತಿ ಪಂಚಾಯತ್ನ ಜನಪ್ರತಿನಿಧಿಗಳು ಕಾರ್ಯಪಡೆಗಳಾಗಿ ಕಾರ್ಯಾಚರಿಸಿ ಹೆಚ್ಚಿನ ಜನಜಾಗೃತಿ ಮೂಡಿಸುತ್ತಿರಬೇಕಿದೆ. ಮುಡಿಪು ಭಾಗದಲ್ಲಿ ವರ್ತಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ವರ್ತಕರು ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು.