ಬಂಟ್ವಾಳ: ತಾಲೂಕಿನ ವಿಟ್ಲದ ಮುಖ್ಯ ರಸ್ತೆಯ ಡಾಂಬರೀಕರಣ ವೇಳೆ ಕಾರೊಂದು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿರುವುದರಿಂದ ಅಷ್ಟು ಜಾಗವನ್ನು ಬಿಟ್ಟು ಡಾಂಬರೀಕರಣ ಮಾಡಿದ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈಗ ಕಾರು ತೆರವಾದ ಬಳಿಕ ಬಾಕಿ ಉಳಿದ ಸ್ಥಳಕ್ಕೆ ಡಾಂಬರೀಕರಣ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ.
ವಿಟ್ಲದ ಶಾಲಾ ರಸ್ತೆಯಿಂದ ಮೇಗಿನಪೇಟೆ ವರೆಗೆ ರಸ್ತೆ ಡಾಂಬರೀಕರಣ ನಡೆಯುತ್ತಿದೆ. ವಿಟ್ಲದ ಎಲಿಮೆಂಟರಿ ಶಾಲೆಯ ಮುಂಭಾಗ ಕಾರೊಂದು ಪಾರ್ಕ್ ಮಾಡಿದ್ದರಿಂದ ಆ ಸ್ಥಳದಲ್ಲಿ ಡಾಂಬರೀಕರಣ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಕಾರು ನಿಂತಿದ್ದ ಸ್ಥಳ ಬಿಟ್ಟು ಅದರ ಹೊರ ಭಾಗದಲ್ಲಿ ಡಾಂಬರೀಕರಣ ಮಾಡಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ವಿವಾದ ಉಂಟು ಮಾಡಿತ್ತು.
ಓದಿ : ಸಚಿವ ಕೆ.ಸುಧಾಕರ್ ಮನೆ ಮುಂದೆಯೇ ಸಿಬ್ಬಂದಿ ನಡುವೆ ಮಾರಾಮಾರಿ: ವಿಡಿಯೋ
ಸಂಜೆ ವೇಳೆ ಡಾಂಬರೀಕರಣ ಮಾಡುವ ವೇಳೆ ವಿಟ್ಲ ಶಾಲಾ ರಸ್ತೆಯಲ್ಲಿ ಹಲವು ವಾಹನಗಳು ಪಾರ್ಕ್ ಮಾಡಲಾಗಿತ್ತು. ಇದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಈ ಬಗ್ಗೆ ಗುತ್ತಿಗೆದಾರರು ಕೆಲವು ವಾಹನಗಳ ಮಾಲೀಕರನ್ನು ಪತ್ತೆ ಮಾಡಿ ತೆರವುಗೊಳಿಸಿದ್ದರು. ಆದರೆ, ಒಂದು ಕಾರಿನ ಮಾಲೀಕರು ಮಾತ್ರ ರಾತ್ರಿ ವರೆಗೂ ಪತ್ತೆಯಾಗಿರಲಿಲ್ಲ. ಇದರಿಂದ ಕಾರು ನಿಂತ ಸ್ಥಳದಲ್ಲಿ ಡಾಂಬರೀಕರಣ ಮಾಡಲು ಸಾಧ್ಯವಾಗದೇ ಬಿಟ್ಟು ಬೇರೆ ಕಡೆ ಡಾಂಬರೀಕರಣ ಮುಂದುವರಿಸಲಾಗಿತ್ತು ಎಂದು ಟೆಂಡರ್ ಪಡೆದ ಗುತ್ತಿಗೆದಾರರು ಸ್ಪಷ್ಟಪಡಿಸಿದ್ದಾರೆ. ಇದೀಗ ಬಿಟ್ಟು ಹೋದ ಸ್ಥಳದಲ್ಲಿ ಡಾಂಬರೀಕರಣ ಮಾಡಲಾಗಿದ್ದು, ವಿವಾದ ಸುಖಾಂತ್ಯ ಕಂಡಿದೆ.