ಬಂಟ್ವಾಳ : ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ತಾಲೂಕಿನ ಸೂರಿಕು ಮೇರುವಿನಲ್ಲಿರುವ ಸೇಂಟ್ ಜೋಸೆಫ್ ಚರ್ಚ್ನಲ್ಲಿ ಮಾರ್ಗಸೂಚಿ ಪ್ರಕಾರ ಭಾನುವಾರ ಪ್ರಾರ್ಥನೆ ನಡೆಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಸೂಚನೆಯಂತೆ ಪ್ರಾರ್ಥನೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗೆ 8 ಗಂಟೆ, 10 ಗಂಟೆ ಮತ್ತು ಸಂಜೆ 4 ಗಂಟೆಗೆ ಸಮಯ ನಿಗದಿಪಡಿಸಿ ಬಲಿಪೂಜೆ ಸೇರಿದಂತೆ ಪ್ರಾರ್ಥನೆ ನಡೆದವು.
ಸರ್ಕಾರದ ಮಾರ್ಗಸೂಚಿಯಂತೆ 10 ವರ್ಷದ ಕೆಳಗಿನವರಿಗೆ ಮತ್ತು 65 ವರ್ಷದ ಮೇಲ್ಪಟ್ಟವರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಮಾಸ್ಕ್ ಧರಿಸದೇ ಬಂದವರಿಗೆ ಚರ್ಚ್ ಪಾಲನಾ ಸಮಿತಿಯವರು ಉಚಿತ ಮಾಸ್ಕ್ ವಿತರಿಸಿದರು. ಚರ್ಚ್ನ ಒಳಗೂ ಹೊರಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಅಳವಡಿಸಲಾಗಿತ್ತು.
ಚರ್ಚ್ನ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾ ಪ್ರಾರ್ಥನೆಯಲ್ಲಿ ಭಾಗವಹಿಸಿದ ಭಕ್ತರಿಗೆ ನಿಯಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮತ್ತು ಕಾರ್ಯದರ್ಶಿ ಮೇರಿ ಡಿಸೋಜಾ ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿದರು.