ಮಂಗಳೂರು : ಕರಾವಳಿಯ ವೀರ ಪುರುಷರಾದ ಕೋಟಿ ಚೆನ್ನಯ್ಯ ಮತ್ತು ಬಿಲ್ಲವರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ಆ ಹಣವನ್ನು ಬಡ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ.
ಕೋಟಿ ಚೆನ್ನಯ್ಯರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅಪಮಾನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆ, ಅವರ ಮುಖಕ್ಕೆ ಮಸಿ ಬಳಿಯುವಂತೆ ಪ್ರತಿಭಾ ಕುಳಾಯಿ ಕರೆ ನೀಡಿದ್ದರು. ಆ ಬಳಿಕ ಜಗದೀಶ್ ಅಧಿಕಾರಿ ಕೋಟಿ ಚೆನ್ನಯ್ಯರ ಕ್ಷೇತ್ರಕ್ಕೆ ತೆರಳಿ ಕ್ಷಮೆಯಾಚಿಸಿದ್ದರು. ಅಧಿಕಾರಿ ಕ್ಷಮೆಯಾಚಿಸಿದ ಹಿನ್ನೆಲೆ, ಪ್ರತಿಭಾ ಕುಳಾಯಿ ಬಹುಮಾನವಾಗಿ ಘೋಷಿಸಿದ್ದ ಹಣವನ್ನು ಕೋಟಿ ಚೆನ್ನಯ್ಯರ ಮೂಲ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ, ಬಡ ವಿದ್ಯಾರ್ಥಿಗಳಿಗೆ ನೀಡುವುದಾಗಿ ಹೇಳಿದ್ದರು.
ಅದರಂತೆ ಫೆ.14 ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ, 1 ಲಕ್ಷ ರೂ. ಹಣವನ್ನು ಹತ್ತು ಮಂದಿ ಬಡ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಅಲ್ಲದೇ, ಗೆಜ್ಹೆಗಿರಿ ಕ್ಷೇತ್ರದಿಂದ 20 ಮಂದಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರಿಸಿಕೊಟ್ಟಲ್ಲಿ, ಅವರ ಶಿಕ್ಷಣ ವೆಚ್ಚ ಭರಿಸುವುದಾಗಿಯು ಘೋಷಿಸಿದ್ದಾರೆ.
ಪ್ರತಿಭಾ ಕುಳಾಯಿ ಅವರು ಗೆಜ್ಜೆಗಿರಿ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿ, ತಪ್ಪು ಮಾಡಿದ ವ್ಯಕ್ತಿ ದೇಯಿ ಬೈದೆತಿ ಮತ್ತು ಕೋಟಿ ಚೆನ್ನಯ್ಯರ ಕಾರಣಿಕತೆಯಿಂದ ಪ್ರಾಯಶ್ಚಿತಪಟ್ಟಿದ್ದು, ಗರಡಿ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿದ್ದಾರೆ. ಹೀಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಆಡಿದ ಮಾತುಗಳನ್ನು ಕೂಡ ಈ ಪುಣ್ಯದ ಮಣ್ಣಿನಲ್ಲಿ ಬಿಡುತ್ತಿದ್ದೇನೆ ಎಂದು ಹೇಳಿದರು.