ಮಂಗಳೂರು: ಕಳೆದ ಬಾರಿಯ ಮಳೆಗೆ ಭಾರೀ ಕಸದೊಂದಿಗೆ ಕುಸಿದು ಸುಮಾರು 25 ಮನೆಗಳನ್ನು ಆಪೋಷನ ಪಡೆದಿರುವ ಪಚ್ಚನಾಡಿ ಘನತ್ಯಾಜ್ಯ ಘಟಕ, ಸದಾ ಕಸದ ರಾಶಿಗೆ ಬೆಂಕಿ ಮುಂತಾದ ಋಣಾತ್ಮಕ ರೀತಿಯಲ್ಲಿಯೇ ಸುದ್ದಿಯಾಗುತ್ತಿತ್ತು. ಇದೀಗ ಸದ್ದಿಲ್ಲದೆ ಅದೇ ತ್ಯಾಜ್ಯ ರಾಶಿಯಲ್ಲಿ ಸಸ್ಯರಾಶಿಯನ್ನು ಬೆಳೆಸುತ್ತಿದೆ. ಸದಾ ವಿಷ ಗಾಳಿಯನ್ನು ಹೊರ ಸೂಸುವ ಈ ತ್ಯಾಜ್ಯ ಕೊಂಪೆಯು, ಮುಂದಿನ ಐದಾರು ವರ್ಷಗಳಲ್ಲಿ ಸ್ವಚ್ಛ ಆಮ್ಲಜನಕ ಹೊರ ಹೊಮ್ಮುವ ರಮ್ಯ ತಾಣವಾಗಲಿದೆ.
ಮಂಗಳೂರಿನ ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಅವರ ಪ್ರಯತ್ನ ಹಾಗೂ ಸ್ಮಾರ್ಟ್ ಸಿಟಿ ಮತ್ತು ಅರಣ್ಯ ಇಲಾಖೆಯ ಮುತುವರ್ಜಿಯಿಂದ, ಇಲ್ಲಿ ವನ್ಯ ಸಂಪತ್ತು ಬೆಳೆಯಲಿದೆ. ವಾರಗಳ ಕಾಲದ ಸುದೀರ್ಘ ಪ್ರಯತ್ನದಿಂದ ಈಗಾಗಲೇ 1,570 ಗಿಡಗಳನ್ನು ನೆಡಲಾಗಿದೆ. ಈ ತ್ಯಾಜ್ಯರಾಶಿ ಘಟಕದಲ್ಲಿ ಇನ್ನೂ ಸಾಕಷ್ಟು ಜಾಗವಿದ್ದು, ಸುಮಾರು ಆರು ಸಾವಿರ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ.
ಸದಾ ಗಿಡಗಳನ್ನು ನೆಡುವುದರಲ್ಲಿಯೇ ಸಂತೋಷವನ್ನು ಕಾಣುವ ಅವರು, ಹಿಂದೆ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸಲು ಆರಂಭಿಸಿದ್ದರು. ಆದರೆ, ರಸ್ತೆ ಅಭಿವೃದ್ಧಿಯ ನೆಪದಲ್ಲಿ ಮರಗಳು ಧರೆಗುರುಳಲು ಆರಂಭಿಸಿದ ಬಳಿಕ ಮಾನವನಿಗೆ ಅನಗತ್ಯವೆನಿಸಿದ, ಯಾರೂ ಓಡಾಡದ ಸ್ಥಳದಲ್ಲಿ ಸಸ್ಯ ಸಂಪತ್ತು ಬೆಳೆಸಲು ಸ್ಮಶಾನವನ್ನು ಆಶ್ರಯಿಸಿದರು.
ಇದರ ಪರಿಣಾಮ ನಗರದ ನಂದಿಗುಡ್ಡೆ ಹಿಂದೂ ರುದ್ರಭೂಮಿ, ಬ್ರಹ್ಮ ಸಮಾಜದ ಸ್ಮಶಾನ, ಚರ್ಚ್ಗಳ ಸ್ಮಶಾನ ಸೇರಿ 22 ಸ್ಮಶಾನಗಳಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಇದೀಗ ಆ ಸ್ಮಶಾನಗಳು ಸಸ್ಯ ಸಂಪತ್ತಿನಿಂದ ತುಂಬಿ ತುಳುಕುತ್ತಿವೆ. ಇದೀಗ ತ್ಯಾಜ್ಯ ರಾಶಿಯ ಕೊಂಪೆಯನ್ನು ಸಸ್ಯ ಕಾಶಿಯಾಗಿಸಲು ಹೊರಟಿದ್ದಾರೆ ಜೀತ್ ಮಿಲನ್ ರೋಚ್.
ಜೀತ್ ಮಿಲನ್ ಅವರು ಬರೀ ಮನುಷ್ಯ ಯೋಗ್ಯವಾದ ಗಿಡಗಳನ್ನು ಮಾತ್ರ ನೆಡುವುದಿಲ್ಲ. ಪ್ರಾಣಿ, ಪಕ್ಷಿ, ಚಿಟ್ಟೆಗಳಿಗಳಿಗೂ ಆವಾಸ ಸ್ಥಾನ, ಆಹಾರ ಒದಗಿಸುವ ಮಾವು, ಹಲಸು, ಹೆಬ್ಬಲಸು, ಆಲ, ತೇಗ, ಹೊಂಗೆ, ಪಾಲಾಶ, ಅಶ್ವತ್ಥ, ಶಾಂತಿ, ಬೀಟಿ, ಬಾದಾಮಿ, ಕದಂಬ, ಸಂಪಿಗೆ, ಅಂಟುವಾಲ ಕಾಯಿ, ಅತ್ತಿ, ಹೊನ್ನೆ, ಬೆಟ್ಟದ ನೆಲ್ಲಿ, ನೇರಳೆ, ಅಂಜೂರ ಮುಂತಾದ 73ಕ್ಕೂ ವೈವಿಧ್ಯವುಳ್ಳ ಇತ್ಯಾದಿ ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡುತ್ತಿದ್ದಾರೆ.
ಇವುಗಳಲ್ಲಿ ನಶಿಸುವ ಭೀತಿಯಲ್ಲಿರುವ ಪಶ್ಚಿಮ ಘಟ್ಟದ ಕಾಡುಹಣ್ಣುಗಳ ಗಿಡಗಳೂ ಇವೆ ಎಂಬುವುದು ಹೆಗ್ಗಳಿಕೆ. ಇವರ ಈ ಕಾಯಕಕ್ಕೆ ಇವರ ಮಗನ ಸಾಥ್ ಇದ್ದು, ಆತನ ಕಾಲೇಜು ಗೆಳೆಯರೇ ಸ್ವಯಂ ಸೇವಕರಾಗಿ ಗಿಡಕ್ಕೆ ಗುಂಡಿ ತೋಡುವುದು, ಗಿಡ ನೆಡುವುದು ಮಾಡುತ್ತಾರೆ.
ಗಿಡಗಳು ನೆಡುವುದು ಮಾತ್ರವಲ್ಲ ಅವುಗಳ ಪೋಷಣೆಗೂ ಸಾಕಷ್ಟು ಸಮಯವನ್ನು ಅವರು ವ್ಯಯ ಮಾಡುತ್ತಾರೆ. ನೀರಿನ ಕೊರತೆಯ ಸಂದರ್ಭ ಟ್ಯಾಂಕರ್ ಮೂಲಕ ನೀರು ತಂದು ಗಿಡಗಳಿಗೆ ಹಾಯಿಸುವ ಕಾರ್ಯ ಮಾಡುತ್ತಾರೆ. ಈ ಕಾರ್ಯಕ್ಕೆ ತನಗೆ ಅರಣ್ಯ ಇಲಾಖೆಯು ಸಹಕಾರ ನೀಡುತ್ತಿದೆ ಎಂದು ಅವರು ನೆನಪಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಬಾರಿ ನಾವು ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿರುವ ಖಾಲಿ ಜಾಗದಲ್ಲಿ ಗಿಡ ನೆಡುತ್ತಿದ್ದೇವೆ. ಸ್ಮಾರ್ಟ್ ಸಿಟಿ ಹಾಗೂ ಅರಣ್ಯ ಇಲಾಖೆಯ ಸಹಕಾರದಿಂದ ಸಾಕಷ್ಟು ಉತ್ತಮ ಗಿಡಗಳು ಲಭ್ಯವಾಗಿವೆ. ಈಗಾಗಲೇ 1,570 ಗಿಡಗಳನ್ನು ನೀಡಲಾಗಿದ್ದು, ಇನ್ನೂ ಒಂದು ವಾರ ಗಿಡನೆಡುವ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ನನ್ನ ಮಗ ಹಾಗೂ ಅವನ ಅಲೋಶಿಯಸ್ ಕಾಲೇಜಿನ ಮಿತ್ರರು ಏಳೆಂಟು ಮಂದಿ ಸಹಕರಿಸಿದ್ದಾರೆ ಎಂದು ಹೇಳಿದರು.