ಮಂಗಳೂರು: ಮನುಷ್ಯನಿಗೆ ನೀರು ಎಷ್ಟು ಮುಖ್ಯವೋ, ಅಷ್ಟೇ ಅಪಾಯಕಾರಿ ಕೂಡ ಹೌದು. ನೀರಿನಲ್ಲಿ ಮುಳುಗಿದರೆ ಪ್ರಾಣಕ್ಕೆ ಅಪಾಯವಿದೆ. ಇಂತಹದರಲ್ಲಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು 29 ತಿರುವು ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರ್ ನಿವಾಸಿ ಕೆ ಚಂದ್ರ ಶೇಖರ ರೈ ಈ ಸಾಧನೆ ಮಾಡಿದ್ದಾರೆ. ನೀರಿನೊಳಗೆ ಉಸಿರನ್ನು ಬಿಗಿಯಾಗಿ ಹಿಡಿಯುವುದೇ ದೊಡ್ಡ ಸಾಧನೆ. ಅಂತದರಲ್ಲಿ ಇವರು ಮಾಡುದ ಸಾಧನೆ ಬೆರಗು ಮೂಡಿಸುತ್ತದೆ.
ಇವರು ಉಸಿರು ಕಟ್ಟಿಕೊಂಡು ಮುಂಭಾಗದಿಂದ ತಿರುವು ಹೊಡೆಯುವ ವಿಶೇಷ ಪ್ರತಿಭೆ ಹೊಂದಿದ್ದಾರೆ. ಇವರು ಒಂದು ನಿಮಿಷ ಎರಡು ಸೆಕೆಂಡ್ನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ 29 ತಿರುವು ಹೊಡೆದಿದ್ದಾರೆ. ಇದು ರಾಷ್ಟ್ರೀಯ ದಾಖಲೆಯಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ. ಇಂಡಿಯಾ ಬುಕ್ ಅಪ್ ರೆಕಾರ್ಡ್ನ ಪ್ರಮಾಣಪತ್ರ ಮತ್ತು ಪದಕ ಈಗಾಗಲೇ ಇವರ ಕೈ ಸೇರಿದೆ.
![India Book of Records oung man achieved in India Book of Records Mangalore young man achieved India Book of Records news Mangalore young man Chandra Shekar Rai ಉಸಿರು ಕಟ್ಟಿಕೊಂಡು ಈಜುಕೊಳದಲ್ಲಿ ಮುಂಭಾಗದಿಂದ 29 ತಿರುವು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಮಂಗಳೂರಿನ ಯುವಕ ಇಂಡಿಯಾ ಬುಕ್ ಅಪ್ ರೆಕಾರ್ಡ್ನ ಪ್ರಮಾಣಪತ್ರ ಮತ್ತು ಪದಕ ಮುಂಭಾಗದಿಂದ ತಿರುವು ಹೊಡೆಯುವ ವಿಶೇಷ ಪ್ರತಿಭೆ](https://etvbharatimages.akamaized.net/etvbharat/prod-images/kn-mng-02-swim-special-7202146_22102022094745_2210f_1666412265_671.jpg)
ಇವರು ಈ ಹವ್ಯಾಸ ದಾಖಲೆಗೋಸ್ಕರ ಅಲ್ಲ. ಚಂದ್ರ ಶೇಖರ ರೈ ಈಜುಕೊಳದಲ್ಲಿ ಮುಂಭಾಗದಿಂದ ತಿರುವು ಹೊಡೆಯುವುದನ್ನು ಗಮನಿಸಿದ ರಾಷ್ಟ್ರೀಯ ಈಜುಪಟುಗಳಾದ ಸೀತಾರಾಮ್ ಮತ್ತು ಮುಹಮ್ಮದ್ ಅವರು ಇದೊಂದು ದಾಖಲೆಯಾಗಲಿದೆ ಎಂದು ಹೇಳಿದ್ದರು. ಇಂತಹ ಒಂದು ದಾಖಲೆ ಗಿನ್ನಿಸ್ನಲ್ಲಿ ದಾಖಲಾಗಿದೆ. ಅಮೆರಿಕಾದ ವ್ಯಕ್ತಿಯೊಬ್ಬರು ಉಸಿರು ಕಟ್ಟಿ 36 ಬಾರಿ ಮುಂಭಾಗದಿಂದ ತಿರುವು ಮಾಡಿದ್ದು, ಇದು ದಾಖಲೆಯಲ್ಲಿದೆ. ಇದೀಗ ಚಂದ್ರಶೇಖರ್ ರೈ ಅವರು ಇಂಡಿಯಾ ಬುಕ್ ಅಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದು, ಗಿನ್ನಿಸ್ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಕೆ ಚಂದ್ರಶೇಖರ ರೈ ಅವರು, ಈ ದಾಖಲೆಗೆ ಕಳುಹಿಸುವ ದಿನ ನಾನು ಉರ್ಧ್ವಾಸನ ಮಾಡಿ ಬಳಿಕ ಇದನ್ನು ಮಾಡಿದೆ. ಉಳಿದ ದಿನಗಳಲ್ಲಿ 31 ತಿರುವು ಮಾಡುತ್ತಿದ್ದೆ. ಇನ್ನೂ ಗಿನ್ನಿಸ್ ದಾಖಲೆ ಮುರಿಯಲು ಪ್ರಯತ್ನಿಸುತ್ತೇನೆ. ದೀರ್ಘವಾಗಿ ನೀರಿನಲ್ಲಿ ಉಸಿರು ಕಟ್ಟಿ ನಿಲ್ಲಲ್ಲು ಕವಿತಾ ಅವರ ಮೂಲಕ ಪ್ರಾಣಾಯಾಮ ಅಭ್ಯಸಿಸುತ್ತಿದ್ದೇನೆ ಎಂದರು.
ಬಳಿಕ ಚಂದ್ರಶೇಖರ ರೈ ಅವರ ಸ್ನೇಹಿತ ನಾಗರಾಜ ಖಾರ್ವಿ ಕಂಚಿಗೋಡು ಅವರು ಮಾತನಾಡಿ, ನೀರಿನಲ್ಲಿ ಒಂದು ತಿರುವು ಹೊಡೆಯುವುದು ಕಷ್ಟ. ಎರಡು ಮೂರು ಮಾಡುವುದು ತುಂಬಾ ಕಷ್ಟ. ಅಂತದರಲ್ಲಿ ಚಂದ್ರಶೇಖರ ರೈ ಅವರು ಒಂದೇ ಉಸಿರಿನಲ್ಲಿ 29 ತಿರುವು ಮಾಡಿರುವುದು ನಿಜವಾಗಿಯೂ ಅದ್ಬುತ ಸಾಧನೆ ಎನ್ನುತ್ತಾರೆ.
ಮಂಗಳೂರು ಈಜುಕೊಳದಲ್ಲಿ ಕೆ ಚಂದ್ರ ಶೇಖರ ರೈ ಅವರು ಮಾಡಿದ ಸಾಧನೆಯನ್ನು ಅಂತಾರಾಷ್ಟ್ರೀಯ ಯೋಗಪಟು ಕವಿತಾ ಎಂಬವರು ತಮ್ಮ ಹೆಚ್ ಡಿ ಕ್ಯಾಮರದಲ್ಲಿ ಚಿತ್ರಿಕರಿಸಿ ಬಳಿಕ ಅದನ್ನು ಇಂಡಿಯಾ ಬುಕ್ ಅಫ್ ರೆಕಾರ್ಡ್ನ ನಿಯಮಾವಳಿ ಪ್ರಕಾರ ದಾಖಲೆಗೆ ಸಲ್ಲಿಸಿದ್ದರು. ಇವಗಳನ್ನು ಪರಿಶೀಲಿಸಿದ ಇಂಡಿಯಾ ಬುಕ್ ಅಫ್ ರೆಕಾರ್ಡ್ ಸಂಸ್ಥೆ ಅವರ ಹೆಸರನ್ನು ದಾಖಲೆಯಲ್ಲಿ ಸೇರಿಸಿದೆ.
ಚಂದ್ರ ಶೇಖರ್ ರೈ ಅವರು ಬಾಲ್ಯದಿಂದಲೇ ಕ್ರೀಡಾಸಕ್ತಿ ಹೊಂದಿದವರು. ಯಾರದೇ ಮಾರ್ಗದರ್ಶನ ಇಲ್ಲದೇ 2005 ರಲ್ಲಿ ಈಜು ಕಲಿತ ಅವರು ಈಜಿನಲ್ಲಿ ವಿವಿಧ ಭಂಗಿಗಳನ್ನು ಮಾಡುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ತರಬೇತುದಾರರಾಗಿ, ಲೈಪ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಪಡುತ್ತಿದ್ದಾರೆ. ಒಟ್ಟಿನಲ್ಲಿ ತನ್ನ ಸತತ ಪ್ರಯತ್ನದ ಮೂಲಕ ಸಾಧನೆ ಮಾಡುತ್ತಿರುವ ಚಂದ್ರಶೇಖರ್ ರೈ ಅವರ ಶುಭವಾಗಲಿ ಎಂದು ಹಾರೈಸೋಣ.