ಮಂಗಳೂರು: ಸ್ಥಳೀಯರ ವಾಹನಗಳಿಗೆ ನೀಡಿದ್ದ ಟೋಲ್ ವಿನಾಯಿತಿ ರದ್ದುಗೊಳಿಸಿರೋದನ್ನು ವಿರೋಧಿಸಿ ಪ್ರತಿಭಟನೆಗೆ ಸಿದ್ದತೆ ನಡೆದಿದೆ. ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿರುವ ಟೋಲ್ ಗೇಟ್ನಲ್ಲಿ ಈವರೆಗೆ ಕೆಎ-19 ನೋಂದಾಯಿತ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಮಾಡುತ್ತಿರಲಿಲ್ಲ. ಆದರೆ, ಜುಲೈ 16ರಿಂದ ಸ್ಥಳೀಯರಿಗೂ ಟೋಲ್ ಸಂಗ್ರಹ ಮಾಡಲು ನಿರ್ಧರಿಸಲಾಗಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ನ ಹತ್ತು ಕಿಲೋಮೀಟರ್ ಅಂತರದಲ್ಲಿ ಹೆಜಮಾಡಿ ಟೋಲ್ ಗೇಟ್ ಇರುವುದರಿಂದ ಎನ್ಐಟಿಕೆ ಟೋಲ್ ಗೇಟ್ ಬಂದ್ ಮಾಡಬೇಕು ಅಥವಾ ಹೆಜಮಾಡಿ ಟೋಲ್ ಗೇಟ್ನೊಂದಿಗೆ ವಿಲೀನ ಮಾಡಬೇಕು ಎಂದು ಹಲವು ದಿನಗಳಿಂದ ಆಗ್ರಹಿಸಲಾಗುತ್ತಿತ್ತು. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಹೋರಾಟವೂ ನಡೆಯುತ್ತಿದೆ. ಆದರೆ, ಬೇಡಿಕೆ ಪರಿಗಣಿಸದೆ ಎನ್ಐಟಿಕೆ ಟೋಲ್ ಗೇಟ್, ಈವರೆಗೆ ಸ್ಥಳೀಯರಿಗೆ ಇದ್ದ ವಿನಾಯತಿಯನ್ನೂ ರದ್ದುಗೊಳಿಸಿದೆ. ಇದು ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಹೋರಾಟ ಮಾಡುತ್ತಿರುವವರ ಆಕ್ರೋಶಕ್ಕೆ ಕಾರಣವಾಗಿದೆ. ನಾಳೆಯಿಂದ ಟೋಲ್ ಸಂಗ್ರಹದ ವಿರುದ್ದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈಗಾಗಲೇ ಎನ್ಐಟಿಕೆ ಟೋಲ್ ಗೇಟ್ ಎದುರು ಸ್ಥಳೀಯರಿಗೆ ಜುಲೈ 16ರಿಂದ ಟೋಲ್ ಸಂಗ್ರಹ ಮಾಡಲಾಗುವ ಬಗ್ಗೆ ಮಾಹಿತಿ ಫಲಕ ಹಾಕಲಾಗಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಜುಲೈ 16ಕ್ಕೆ ಬೆಳಗ್ಗಿನಿಂದಲೇ ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.