ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಬ್ಯಾಂಕ್ ಗಳಲ್ಲೇ ಮುಂಚೂಣಿಯಲ್ಲಿರುವ ಎಸ್ಸಿಡಿಸಿಸಿ ಬ್ಯಾಂಕ್ ಆರ್ಥಿಕ ವರ್ಷದಲ್ಲಿ 50.08 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕಿಂತ ಶೇ.48.82 ಏರಿಕೆ ಕಂಡಿದೆ. ಇದು ಎಸ್ ಸಿಡಿಸಿಸಿ ಬ್ಯಾಂಕ್ ನ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ನಗರದ ಎಸ್ಸಿಡಿಸಿಸಿ ಬ್ಯಾಂಕ್ ನಲ್ಲಿಂದು ಮಾತನಾಡಿದ ಅವರು, ಈ ವರ್ಷ 11,598 ಕೋಟಿ ರೂ. ಒಟ್ಟು ವ್ಯವಹಾರ ದಾಖಲೆ ಮಾಡಿದ್ದು, ಈ ಮೂಲಕ ಕಳೆದ ವರ್ಷದ ವ್ಯವಹಾರಕ್ಕಿಂತ ಶೇಕಡಾ 14.87 ಏರಿಕೆ ಕಂಡಿದೆ. ಈ ಬಾರಿ 2022-23ನೇ ಸಾಲಿಗೆ 14 ಸಾವಿರ ಕೋಟಿ ರೂ. ವ್ಯವಹಾರದ ಗುರಿ ಹೊಂದಿದೆ. ಎಸ್ಸಿಡಿಸಿಸಿ ಬ್ಯಾಂಕ್, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯಾವುದೇ ಠೇವಣಾತಿ ಇಲ್ಲದೆ ತನ್ನ 109 ಶಾಖೆಯಲ್ಲಿ ಒಟ್ಟು 5,649.97 ಕೋಟಿ ರೂ. ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ ಎಂದು ಮಾಹಿತಿ ನೀಡಿದರು.
ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಎಲ್ಲಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಠೇವಣೆ ಸಂಗ್ರಹದಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ಶೇ.14.11 ಏರಿಕೆಯಾಗಿದೆ. ಎಸ್ಸಿಡಿಸಿಸಿಯಲ್ಲಿ ಈ ಬಾರಿ ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 5,947.86 ಕೋಟಿ ರೂ. ಆಗಿದೆ.
ಸತತ 27 ವರ್ಷಗಳಿಂದ ಕೃಷಿ ಸಾಲ ಮರು ಪಾವತಿಯಲ್ಲಿ ಶೇ. 100ರ ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿ ಸಾಧನೆಗೈದಿದೆ. ಎಸ್ಸಿಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದಿರುವ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದು 2020 ಏಪ್ರಿಲ್ 1 ರಿಂದ 2021ರ ಜೂನ್ 30ರ ಅವಧಿಯಲ್ಲಿ ಕೋವಿಡ್ ನಿಂದ ಮೃತಪಟ್ಟ 174 ರೈತರ ಕುಟುಂಬಕ್ಕೆ 1,52,44,700 ರೂ. ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದು ತಿಳಿಸಿದರು.