ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಬಗ್ಗೆ ಪಿಯುಸಿಎಲ್, ಎಐಪಿಎಫ್, ಎನ್ಸಿ ಎಚ್ ಆರ್ ಓ ನ ಸತ್ಯಶೋಧನ ಸಮಿತಿ ಎರಡು ದಿನಗಳ ಪರಿಶೀಲನೆಯ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.
ಮಂಗಳೂರಿನಲ್ಲಿ ಮಾತನಾಡಿದ ಪಿಯುಸಿಎಲ್ ರಾಜ್ಯಾಧ್ಯಕ್ಷ ಪ್ರೊ.ರಾಜೇಂದ್ರ, ಎರಡು ದಿನಗಳ ಕಾಲ ಪಿಯುಸಿಎಲ್, ಎಐಪಿಎಫ್ ಮತ್ತು ಎನ್ ಎಚ್ ಆರ್ ಓ ನ ಸದಸ್ಯರು ಎರಡು ತಂಡಗಳಾಗಿ ಘಟನೆ ನಡೆದ ಸ್ಥಳದ ಜನರ ಅಭಿಪ್ರಾಯ, ಆಸ್ಪತ್ರೆಯಲ್ಲಿರುವ ಗಾಯಾಳುಗಳು, ಬಲಿಯಾದ ಇಬ್ಬರ ಕುಟುಂಬಸ್ಥರನ್ನು ಭೇಟಿ ಮಾಡಿ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಇದೆಲ್ಲವನ್ನು ಕ್ರೋಡಿಕರಿಸಿ ಮಧ್ಯಂತರ ವರದಿ ಬಿಡುಗಡೆ ಮಾಡಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ವರದಿ ಬಿಡುಗಡೆ ಮಾಡಲಾಗುವುದು ಎಂದರು.
ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ಪೊಲೀಸರು ಪೂರ್ವಾಗ್ರಹ ತೋರಿರುವ ಬಗ್ಗೆ ತನಿಖೆಯಾಗಬೇಕು. ಪೊಲೀಸರು ಬಲಿಯಾದವರ ಮೇಲೆ ಎಫ್ ಐ ಆರ್ ಮಾಡಿರುವುದು ಸರಿಯಲ್ಲ. ಪೊಲೀಸ್ ಕಮೀಷನರ್ ಹರ್ಷ ಮತ್ತು ಗುಂಡು ಹೊಡೆದರು ಸಾಯಲಿಲ್ಲ ಎಂಬ ಹೇಳಿಕೆ ನೀಡಿದ ಇನ್ಸ್ ಪೆಕ್ಟರ್ ಇಬ್ಬರನ್ನು ಅಮಾತುಗೊಳಿಸಬೇಕು. ಬಲಿಯಾದ ಇಬ್ಬರ ಪರಿಹಾರ ವಾಪಾಸು ಪಡೆದಿರುವುದು ಸರಿಯಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಾಯಕರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.