ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕೆ. ಸಿ. ರೋಡ್ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಇವರು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಸಿದ್ದರು. ಈ ಬಗ್ಗೆ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿದ್ದಾಗ ಇವರು ಇತರೆಡೆಯು ಕಳವು ನಡೆಸಿರುವುದು ತಿಳಿದು ಬಂದಿದೆ.
ಇವರು ಬಂಟ್ವಾಳದ ದಾಸಕೋಡಿ ಪೆಟ್ರೋಲ್ ಬಂಕ್ನಲ್ಲಿ ಸಿಬ್ಬಂದಿಗಳಿಗೆ ಮಾರಕಾಯುಧ ತೋರಿಸಿ ನಗದು ಸುಲಿಗೆ, ಪುಂಜಲ್ ಕಟ್ಟೆ ಠಾಣಾ ವ್ಯಾಪ್ತಿಯ ಪಿಲತಬೆಟ್ಟು ಧೈಕಿನಕಟ್ಟೆ ಪೆಟ್ರೋಲ್ ಬಂಕ್ನಲ್ಲಿ ಕಳ್ಳತನ, ಮಂಗಳೂರಿನ ಅಡ್ಯಾರ್ ಪೆಟ್ರೋಲ್ ಬಂಕ್ನಲ್ಲಿ ಕಳವಿಗೆ ಯತ್ನ, ಎರಡು ಬಾರಿ ಉಳ್ಳಾಲದ ಕೋಟೆಕಾರ್ ಬೀರಿಯ ಮೆಸ್ಕಾಂನ ಎಟಿಪಿ ಮೆಷಿನ್ನ ನಗದು ಕಳವು, ಸೈಂಟ್ ಸೆಬಾಸ್ಟಿಯನ್ ಶಿಕ್ಷಣ ಸಂಸ್ಥೆಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪೆಟ್ರೋಲ್ ಬಂಕ್ ಮಾಲೀಕರ ಸಂಘವು ಇತ್ತೀಚೆಗೆ ಮಂಗಳೂರು ಪೊಲೀಸ್ ಕಮೀಷನರ್ಗೆ ಮನವಿಯನ್ನು ಸಲ್ಲಿಸಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.