ಉಳ್ಳಾಲ(ಮಂಗಳೂರು): ಕೇರಳ ಸರ್ಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಗಿದೆ.
100ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜು.11ರ ಅವಧಿವರೆಗೆ ದ.ಕ ಜಿಲ್ಲಾಡಳಿತ ಇಲ್ಲಿ ಕೆಲಸ ಮಾಡುವವರಿಗೆ ಪಾಸ್ ನೀಡಿದ್ದು, ಅಲ್ಲಿಯವರೆಗೂ ನಮ್ಮನ್ನು ಸಂಚಾರ ಮಾಡಲು ಬಿಡಬೇಕು ಎಂದು ಮಂಗಳೂರಿಗೆ ಬರುವ ಕೇರಳಿಗರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆದರೆ, ಮಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವುದರಿಂದ ಈ ಹಿಂದೆ ಕೇರಳದಿಂದ ಮಂಗಳೂರಿಗೆ ಬಂದಂತಹ 5 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿತ್ತು. ಹೀಗಾಗಿ ಸೋಂಕು ಹರಡುವ ಭೀತಿಯಿಂದ ಮಂಗಳೂರಿಗೆ ಹೋದಲ್ಲಿ ಅಲ್ಲಿಯೇ ಉಳಿದುಕೊಳ್ಳುವಂತೆ ಕೇರಳ ಸರ್ಕಾರ ಕಠಿಣ ಆದೇಶ ಜಾರಿ ಮಾಡಿದೆ.

ಇದರಿಂದ ಪೊಲೀಸರ ಹಾಗೂ ಜನರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.