ದಕ್ಷಿಣಕನ್ನಡ: ಕೊರೊನಾ ವೈರಸ್ ಹರಡದಂತೆ ತಡೆಯಲು ಬೆಳ್ತಂಗಡಿ ತಾಲೂಕಿನ ಎಲ್ಲಾ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಪ್ರವೇಶಿಸುವ ಸಾರ್ವಜನಿಕರನ್ನ ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಎಂದು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಆದೇಶಿಸಿದ್ದಾರೆ.

ತಪಾಸಣೆ ಸಮಯದಲ್ಲಿ ಪಾಸ್ ಇಲ್ಲದೇ ಪ್ರವೇಶಿಸುವವರ ವಿರುದ್ಧ ಮೊಕದ್ದಮೆ ದಾಖಲಿಸುವುದು. ರಾಜ್ಯದಿಂದ ತಾಲೂಕಿಗೆ ಪ್ರವೇಶಿಸುವವರ ಮಾಹಿತಿ ಸಂಗ್ರಹಿಸಿ, ಪ್ರತಿದಿನ ಆರೋಗ್ಯ ಇಲಾಖೆಗೆ ನೀಡಬೇಕು. ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಂತಹವರ ಮಾಹಿತಿ ದೊರಕಿದ ತಕ್ಷಣ ಅವರ ಹಾಗೂ ಕುಟುಂಬದ ಸದಸ್ಯರಿಗೆ ಹೋಂ ಕ್ವಾರಂಟೈನ್ ಸೀಲ್ ಹಾಕಬೇಕು. ಹೋಂ ಕ್ವಾರಂಟೈನ್ ಆದ ವ್ಯಕ್ತಿಯು ವಾಸಿಸುವ ಮನೆಯನ್ನ ಸಂಪೂರ್ಣವಾಗಿ ಸೀಲ್ ಮಾಡಿ,14 ದಿನಗಳವರೆಗೆ ಮನೆಯಿಂದ ಹೊರಬಾರದಂತೆ ಸೂಚಿಸಿ ಮನೆಯ ಎದುರು ಕ್ವಾರಂಟೈನ್ ನೋಟಿಸ್ ಅಂಟಿಸಬೇಕು. ಈ ಬಗ್ಗೆ ಅಕ್ಕ ಪಕ್ಕದ ಮನೆಗಳಿಗೂ ನೋಟಿಸ್ ನೀಡಬೇಕು. ಕ್ವಾರಂಟೈನ್ ಆದ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಕ್ಕೆ ತೆರಳಿದ್ರೆ, ಪೊಲೀಸರು ಎಫ್ಐಆರ್ ದಾಖಲಿಸಬೇಕು ಎಂದು ತಹಶೀಲ್ದಾರ್ ಸೂಚಿಸಿದ್ದಾರೆ.

ಅಗತ್ಯ ಸಾಮಗ್ರಿಗಳಿಗಾಗಿ ಹೋಂ ಕ್ವಾರಂಟೈನ್ ಆದ ಮನೆಯವರು ಹೊರಗೆ ಬಾರದೆ ಬಂಧುಗಳಿಂದ, ಸ್ನೇಹಿತರಿಂದ ವ್ಯವಸ್ಥೆ ಮಾಡಿಕೊಳ್ಳಬೇಕು. ಕ್ವಾರಂಟೈನ್ ಮನೆಯ ಸದಸ್ಯರ ನಿರಂತರ ಆರೋಗ್ಯ ತಪಾಸಣೆ ಮಾಡಬೇಕು. ಒಂದು ವೇಳೆ ಅನ್ಯ ಮಾರ್ಗದ ಮೂಲಕ ತಪಾಸಣೆಗೆ ಒಳಪಡದೇ ಅನ್ಯ ಜಿಲ್ಲೆ ಅಥವಾ ರಾಜ್ಯದಿಂದ ಬಂದು,ತಾಲೂಕಿಗೆ ಪ್ರವೇಶಿಸಿದ್ದಲ್ಲಿ ಅಂತಹವರನ್ನ ಗುರುತಿಸಿ ಆರೋಗ್ಯ ಸಿಬ್ಬಂದಿ, ಪೊಲೀಸ್, ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.