ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ತಯಾರಿಸಿದ ಗೋಮಯ ಹಣತೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಾಲಯ ತಲುಪಿವೆ. ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಸುಮಾರು 10 ಸಾವಿರ ಗೋಮಯ ಹಣತೆಗಳನ್ನು ತಯಾರಿಸಿದ್ದಾರೆ.
ವಿದ್ಯಾ ಸಂಸ್ಥೆಯಲ್ಲಿ ಗೋಶಾಲೆ ಇದ್ದು, ಗೋವುಗಳ ಸಗಣಿ ಮತ್ತು ಗೋಮಯವನ್ನು ಹದಗೊಳಿಸಿ ಬಳಿಕ ನಿರ್ಧಿಷ್ಟ ಅಚ್ಚಿನಲ್ಲಿ ಒತ್ತಿ ಹಣತೆಗಳನ್ನು ತಯಾರಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ಥಳೀಯ ಮಾತೃ ಮಂಡಳಿಯೊಂದಿಗೆ ಸೇರಿಕೊಂಡು ಪ್ರತಿ ದಿನ ವಿವಿಧ ತಂಡಗಳಲ್ಲಿ ಸಹಸ್ರಾರು ಹಣತೆಗಳನ್ನು ತಯಾರಿಸಿದ್ದಾರೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳ ಹೆತ್ತವರು ಹಣತೆ ತಯಾರಿಕೆಯಲ್ಲಿ ಕೈ ಜೋಡಿಸಿದ್ದಾರೆ.
ಹಣತೆಗಳು ಹಗುರವಾಗಿದ್ದು, ನೀರಿನ ಕೆರೆಗಳಲ್ಲಿ ಅಥವಾ ಕೊಳಗಳಲ್ಲಿಯೂ ದೀಪಗಳನ್ನು ಹಚ್ಚಿ ದೀಪಾವಳಿ ಸಂಭ್ರಮ ಆಚರಿಸಬಹುದಾಗಿದೆ. ಹಣತೆಗಳು ಕೆಳಗೆ ಬಿದ್ದರೂ ಹುಡಿಯಾಗುವುದಿಲ್ಲ, ಎಣ್ಣೆ ಅಥವಾ ತುಪ್ಪ ಹಾಕಿ ಉರಿಸುವುದರಿಂದ ಪರಿಸರಕ್ಕೂ ಹಾನಿ ಇಲ್ಲ. ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ. ಈ ವರ್ಷ ಪಟಾಕಿ ಮಾರಾಟಕ್ಕೆ ನಿಷೇಧವಿರುವುದರಿಂದಲೂ ಹಣತೆಯ ಬೆಳಕು ದೀಪಾವಳಿಗೆ ವಿಶೇಷ ಮೆರಗು ನೀಡಲಿದೆ ಎಂದು ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ ಕಟ್ಟೆ ತಿಳಿಸಿದ್ದಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ದೀಪಗಳು ತಲುಪಿವೆ.