ಸುಳ್ಯ: ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದ್ದರಿಂದ ಸಾಮಾನ್ಯವಾಗಿ ಎಲ್ಲಾ ಸ್ಥರದ ಜನರ ಬದುಕೇ ಸಂಕಷ್ಟಮಯವಾಗಿದೆ. ಅದರಲ್ಲೂ ಸಣ್ಣಪುಟ್ಟ ರೈತರ ಆರ್ಥಿಕ ಮೂಲಗಳಿಗೂ ಏಟು ಬಿದ್ದಿದೆ. ಅಂತೆಯೇ ಕರಾವಳಿ ಭಾಗ ರೈತರು ಮೂಲ ಬೆಳೆಯೊಂದಿಗೆ ಉಪ ಬೆಳೆಯನ್ನಾಗಿಸಿಕೊಂಡು ಬಂದ ವೀಳ್ಯದೆಲೆಗೂ ಲಾಕ್ ಡೌನ್ನಿಂದಾಗಿ ಮಾರುಕಟ್ಚೆ ಇಲ್ಲದಂತಾಗಿದೆ. ಇದರಿಂದಾಗಿ ರೈತನಿಗೆ ತುಂಬಲಾರದ ನಷ್ಟವುಂಟಾಗಿದೆ.
ಕರಾವಳಿಯಲ್ಲಿ ಶುಭ ಮತ್ತು ಅಮಂಗಳ ಕಾರ್ಯದಲ್ಲೂ ವೀಳ್ಯದೆಲೆಯ ಪ್ರಾಮುಖ್ಯತೆ ಮಹತ್ತರವಾಗಿದೆ. ಬಹುಮುಖ್ಯವಾಗಿ ವರ್ಷಾರಂಭದಿಂದಲೇ ವೀಳ್ಯದೆಲೆಗೆ ಭಾರಿ ಬೇಡಿಕೆ ಇರುವುದು ಸಾಮಾನ್ಯ. ಅದರಲ್ಲೂ ಮಾರ್ಚ್ನಿಂದ ಮೇ ತಿಂಗಳಲ್ಲಿ ಶುಭಕಾರ್ಯಗಳ ಪರ್ವ ಕಾಲ ಆ ಸಮಯದಲ್ಲಿ ವೀಳ್ಯದೆಲೆಗೆ ಬೇಡಿಕೆ ಹೆಚ್ಚು. ಈ ಸಮಯದಲ್ಲಿ ಧಾರಣೆಯೂ ಉತ್ತಮವಾಗಿರುತ್ತದೆ. ಕಳೆದ ವರ್ಷವೂ ಬೇಡಿಕೆಯಿರುವ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆಯಾಗಿ ವೀಳ್ಯ ಕೃಷಿಯು ನೆಲಕಚ್ಚಿತ್ತು. ಇದೀಗ ಮತ್ತೆ ಅದೇ ಸಂದರ್ಭ ಎದುರಾಗಿದೆ.
ಈ ಭಾರಿ ಮದುವೆ ಸಮಾರಂಭಗಳು, ಶುಭ ಕಾರ್ಯಗಳಿಗೆ ಸೀಮಿತ ಜನರ ಮಾರ್ಗಸೂಚಿ ದೈವ ದೇವರುಗಳ ವೈದಿಕ ಕಾರ್ಯಗಳು ನಡೆಯದಿರುವುದು ಮುಂತಾದ ಕಾರಣದಿಂದಾಗಿ ವೀಳ್ಯದೆಲೆಯನ್ನು ಕೇಳುವವರಿಲ್ಲಂತಾಗಿದೆ. ಕಟಾವು ಮಾಡಿಲ್ಲವಾದರೆ ವೀಳ್ಯದೆಲೆಯ ಗುಣಮಟ್ಟ ಕಡಿಮೆಯಾಗುತ್ತದೆ. ಬಹುತೇಕ ರೈತರು ಶುಭ ಕಾರ್ಯಗಳಿಗೆ ಬೇಕಾದ ವೀಳ್ಯದೆಲೆ ತಳಿಯನ್ನು ಬೆಳೆಸುವ ಮೂಲಕ ಅದಾಯವನ್ನು ಗಿಟ್ಟಿಸಿಕೊಳ್ಳುತ್ತಾರೆ. ವೀಳ್ಯದೆಲೆಯನ್ನು ಕಟಾವು ಮಾಡುತ್ತಾ ಇದ್ದರೆ ಹೊಸ ಎಲೆಗಳು ಚಿಗುರುವುದಕ್ಕೆ ಅವಕಾಶವಿರುತ್ತದೆ. ಇಲ್ಲವಾದಲ್ಲಿ ಆ ಬಳ್ಳಿ ಸೊರಗುತ್ತದೆ. ಬಳ್ಳಿಯಲ್ಲಿ ಬಾಕಿಯಾಗಿರುವ ವೀಳ್ಯದೆಲೆಯ ಗುಣಮಟ್ಟವೂ ಕಡಿಮೆಯಾಗುತ್ತದೆ. ಇದರಿಂದಾಗಿ ರೈತರು ವಿಚಲಿತರಾಗಿದ್ದಾರೆ.