ಸುಳ್ಯ: ವೈದ್ಯ ಲೋಕಕ್ಕೆ ಸವಾಲಾಗಿದ್ದ ಅಪರೂಪ ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಕಲ್ಲುಗುಂಡಿಯ ಬಾಲಕಿ ಜೆಮೀನಾ ಕೆ.ಜಾನ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಎಂಬುವರ ಐದೂವರೆ ವರ್ಷದ ಮಗಳಿಗೆ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH), ಎಪ್ಸ್ಟೀನ್ ಬಾರ್ ವೈರಸ್ [Hemophagocytic Lymphohistiocytosis (HLH), Epstein Barr Virus (EBV)] ರೋಗವು ಬಾಧಿಸಿತ್ತು.
ಬಾಲಕಿಗೆ ಎರಡರಿಂದ ಮೂರು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ರೋಗ ಉಲ್ಬಣಗೊಂಡು ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಜೆಮೀನಾಗೆ ಅಸ್ತಿ ಮಜ್ಜೆ(Bone marrow) ಬದಲಾವಣೆ ಮಾಡಬೇಕಾಗಿದ್ದು, ಇದು ಅತ್ಯಂತ ಸೂಕ್ಷ್ಮ ಮತ್ತು ದೊಡ್ಡ ಮೊತ್ತ ಖರ್ಚಾಗುವ ಚಿಕಿತ್ಸೆಯಾಗಿದೆ.
ಚಿಕಿತ್ಸೆಗೆ ಅಂದಾಜು ಸುಮಾರು ₹ 60 ಲಕ್ಷಕ್ಕಿಂತಲೂ ಹೆಚ್ಚು ಹಣ ಬೇಕಾಗಿತ್ತು. ಮಗುವಿನ ಹಾಗೂ ಪೋಷಕರ ಸಂಕಷ್ಟಕ್ಕೆ ಮಿಡಿದ ಹಲವರು ನೆರವು ನೀಡಿದ್ದರು. ವಿಶೇಷವಾಗಿ ಜೆಮೀನಾಳ ಗೆಳತಿಯರೂ ಕೂಡ ಧನ ಸಂಗ್ರಹ ಮಾಡಿ ತಮ್ಮಿಂದಾದ ಪುಟ್ಟ ಸಹಾಯ ಮಾಡಿದ್ದರು. ನಿನ್ನೆ ಅಸ್ತಿ ಮಜ್ಜೆ ಬದಲಾವಣೆ ಚಿಕಿತ್ಸೆ ಕೂಡ ಮಾಡಲಾಗಿತ್ತು. ಮುಂದಿನ ಎರಡು ವಾರ ಮಗುವಿಗೆ ಯಾವುದೇ ಸೋಂಕು (infection) ಕಂಡುಬರದಿದ್ದರೆ, ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಈ ಚಿಕಿತ್ಸೆಯ ಬಳಿಕ ಕನಿಷ್ಠ ಎರಡು ವರ್ಷಗಳ ನಂತರ ಬಾಲಕಿಯು ಯಥಾಸ್ಥಿತಿಗೆ ಮರಳಲು ಸಾಧ್ಯವಾಗಬಹುದು ಎಂಬುದಾಗಿ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಜೆಮೀನಾ ಇಂದು ಮೃತಪಟ್ಟಿದ್ದಾಳೆ.
ಇದನ್ನೂ ಓದಿ: 'ಎರಿ ದೊರೆಯಾತಲೇ.. ದೈವ ದರ್ಬಾರ್ ಆತಲೇ ಪರಾಕ್': ಕಾರ್ಣಿಕ ನುಡಿದ ದೇವರಗುಡ್ಡದ ಗೊರವಪ್ಪ