ಮಂಗಳೂರು/ದಕ್ಷಿಣ ಕನ್ನಡ: ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಲು ಕೇಂದ್ರ ಹಾಗೂ ರಾಜ್ಯ ಸರಕಾರ ದಾನಿಗಳಿಂದ ದೇಣಿಗೆ ಸಂಗ್ರಹಿಸುತ್ತಿದೆ.
ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ ಅಳಿಲು ಸೇವೆ ಮಾಡಿದ್ದಾನೆ. ಅತಾ-ವುರ್-ರೆಹ್ಮಾನ್ ಎಂಬ ಬಾಲಕ ತನ್ನ ತಂದೆ ಹಾಗೂ ಮನೆಯವರು ನೀಡುವ ಪಾಕೆಟ್ ಮನಿಯನ್ನು ಜೋಪಾನವಾಗಿ ಹುಂಡಿಯಲ್ಲಿ ಹಾಕಿದ್ದ. ಈ ಮೂರು ದಿನಗಳಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸರಕಾರ ಎಲ್ಲರಿಂದ ದೇಣಿಗೆ ಕೇಳುತ್ತಿರುವುದನ್ನು ಅರಿತ ಬಾಲಕ ತಾನೂ ತನ್ನ ಪಾಕೆಟ್ ಮನಿಯನ್ನು ದೇಣಿಗೆ ನೀಡಿದ್ದಾನೆ.
ಇದನ್ನು ಪ್ರೋತ್ಸಾಹಿಸಿದ ಬಾಲಕನ ಪೋಷಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಡಿಸಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣವನ್ನು ಸಲ್ಲಿಸಿದ್ದಾರೆ. ಭಟ್ಕಳ ಮೂಲದವರಾದ ಅತಾ-ವುರ್-ರೆಹ್ಮಾನ್ ಕುಟುಂಬದವರು ಈಗ ಮಂಗಳೂರಿನ ಫಳ್ನೀರ್ ನಲ್ಲಿ ನೆಲೆಸಿದ್ದಾರೆ. ಅತಾ-ವುರ್-ರೆಹ್ಮಾನ್ ಮಂಗಳೂರಿನ ಯನೆಪೊಯ ಮೊಂಟೆಸ್ಸರಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಇದೀಗ ಈ ಪುಟ್ಟ ಬಾಲಕನ ಈ ಕಳಕಳಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.