ಮಂಗಳೂರು: ಈಟಿವಿ ಭಾರತ ಫಲಶ್ರುತಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಂದು ಶಿಳ್ಳೆಕ್ಯಾತ ಸಮುದಾಯದ ಟೆಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರಿನ ಹೊಯಿಗೆ ಬಜಾರ್ನ ನೇತ್ರಾವತಿ ನದಿ ತೀರದಲ್ಲಿ ಟೆಂಟ್ಗಳಲ್ಲಿ ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಇತ್ತೀಚೆಗೆ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಟೆಂಟ್ಗಳು ಹಾರಿ ಹೋಗಿ ಹಲವು ಸಮಸ್ಯೆಗಳನ್ನು ಅನುಭವಿಸಿದ್ದರು. ಮಾತ್ರವಲ್ಲದೆ ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುರಿತು ''ಕೊರೊನಾ ಸಂಕಷ್ಟ ಸಮಯದಲ್ಲೂ ಕೇಳೋರಿಲ್ಲ ಶಿಳ್ಳೆಕ್ಯಾತರ ಗೋಳು'' ಎಂಬ ಶೀರ್ಷಿಕೆಯಡಿ ಮೇ 19ರಂದು 'ಈಟಿವಿ ಭಾರತ'ದಲ್ಲಿ ಸುದ್ದಿ ಪ್ರಕಟವಾಗಿತ್ತು.


ದ.ಕ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಅವರು ಇಂದು ಹೊಯಿಗೆಬಜಾರಿನ ಶಿಳ್ಳೆಕ್ಯಾತ ಅಲೆಮಾರಿ ಜನಾಂಗದವರು ವಾಸಿಸುತ್ತಿರುವ ಕ್ಯಾಂಪ್ಗೆ ಭೇಟಿ ನೀಡಿ, ಅವರ ಸಮಸ್ಯೆ ಆಲಿಸಿದರು. ಅಲ್ಲದೆ, ಅವರಿಗೆ ಪಡಿತರ ಸಾಮಗ್ರಿ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಅದೇ ರೀತಿ ಅವರಿಗೆ ಸೊಳ್ಳೆ ಪರದೆಗಳನ್ನು ವಿತರಿಸಲು ಹಾಗೂ ಎಲ್ಲರ ಆರೋಗ್ಯ ತಪಾಸಣೆ ನಡೆಸಲು ಸೂಚನೆ ನೀಡಿದರು.
ವಸತಿ, ವಿದ್ಯುತ್, ದಾರಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಈಟಿವಿ ಭಾರತ ವರದಿ ಓದಿ ಬಡಪಾಯಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಶಿಳ್ಳೆಕ್ಯಾತರಿಗೆ ಆದಷ್ಟು ಬೇಗ ಮೂಲ ಸೌಕರ್ಯಗಳು ಸಿಗಲಿ ಎಂದು ಆಶಿಸುತ್ತೇವೆ.