ಮಂಗಳೂರು: ಜಿಲ್ಲೆಯ ಪ್ರವಾಸೋದ್ಯಮದ ಕಲ್ಪವೃಕ್ಷವೆನಿಸಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದೆ ಸೊರಗಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ನಗರದ ಹೃದಯ ಭಾಗದಿಂದ ಕೇವಲ 10ಕಿ.ಮೀ. ಅಂತರದಲ್ಲಿ ಮೂಡುಶೆಡ್ಡೆ ಗ್ರಾಮದಲ್ಲಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು 356 ಎಕರೆ ವಿಸ್ತಾರ ಪ್ರದೇಶದಲ್ಲಿದೆ. ಇಲ್ಲಿ ಜೈವಿಕ ಉದ್ಯಾನವನ, ಸಸ್ಯಕಾಶಿ, ಪ್ರಾದೇಶಿಕ ವಿಜ್ಞಾನ ಕೇಂದ್ರ, 3ಡಿ ತಾರಾಲಯ, ಗುತ್ತುಮನೆ ಸಂಸ್ಕೃತಿ ಗ್ರಾಮ, ಕುಶಲಕರ್ಮಿಗಳ ಗ್ರಾಮ, ಮಾನಸ ವಾಟರ್ ಪಾರ್ಕ್, ದೋಣಿ ವಿಹಾರ ಕೇಂದ್ರ, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಟ್ರೀಪಾರ್ಕ್ ಇತ್ಯಾದಿ ಪ್ರವಾಸಿಗರನ್ನು ಆಕರ್ಷಿಸುವ ಎಲ್ಲಾ ರೀತಿಯ ಪ್ರವಾಸಿ ತಾಣಗಳು ಒಂದೇ ಸೂರಿನಡಿ ಇವೆ. ಆದರೆ ಇಲ್ಲಿರುವ ಪ್ರವಾಸಿತಾಣಗಳ ಬಗ್ಗೆ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ತಾಣಗಳು ಸೊರಗುತ್ತಿವೆ.
ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದಲ್ಲಿ ಹುಲಿ,ಸಿಂಹ, ಚಿರತೆ, ಉರಗ, ಪಕ್ಷಿ ಸಂಕುಲಗಳಲ್ಲದೆ ಕಾಡುಕುರಿ, ಮೊಸಳೆ, ಕಾಳಿಂಗ ಸರ್ಪಗಳಂತಹ ಅಪರೂಪದ ವನ್ಯ ಸಂಪತ್ತುಗಳಿವೆ. ಮೊಸಳೆಗಳು ಆವಾಸತಾಣಗಳಲ್ಲಿ ಕಸಕಡ್ಡಿಗಳು ತುಂಬಿವೆ. ಹುಲಿಗಳಿಗೆ ಬೇಸಿಗೆ ಕಾಲಕ್ಕೆಂದು ಇಟ್ಟಿರುವ ನೀರಿನಲ್ಲಿಯೂ ಹೂಳು ತುಂಬಿದಂತಾಗಿದೆ.
ಹಾವು, ಸರಿಸೃಪ, ಪುನುಗುಬೆಕ್ಕು, ಮುಂಗುಸಿ ಇರುವ ಗ್ಲಾಸ್ಗಳು ನಿರ್ವಹಣೆ ಇಲ್ಲದೆ ಧೂಳು ಹಿಡಿದು ಪ್ರಾಣಿಗಳೇ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಕುಶಲಕರ್ಮಿಗಳ ಗ್ರಾಮ, ಸಸ್ಯಕಾಶಿ, ಮತ್ಸ್ಯಾಲಯಗಳು ಪ್ರವಾಸಿಗರ ಕಣ್ಣಿಗೆ ಬೀಳದೆ ಮರೆಯಾಗುತ್ತಿವೆ. ಇದರಿಂದ ಪ್ರವಾಸಿಗರಿಗೆ ಪಿಲಿಕುಳವೆಂದರೆ ಬರೀ ಗುತ್ತುಮನೆ, ಜೈವಿಕ ಉದ್ಯಾನವನ, ವಾಟರ್ ಪಾರ್ಕ್, ದೋಣಿ ವಿಹಾರ ಕೇಂದ್ರ, ವಿಜ್ಞಾನ ಕೇಂದ್ರಗಳು ಮಾತ್ರ ಕಣ್ಣಿಗೆ ಬೀಳುತ್ತಿವೆ. ಕರಕುಶಲ ಕರ್ಮಿಗಳ ಗ್ರಾಮದಲ್ಲಿ ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಬಿದಿರು, ಮರಗಳಿಂದ ಮಾಡುವ ಅಪರೂಪದ ಕುಶಲಕಲೆಗಳು ಮೂಲೆಗುಂಪಾಗುತ್ತಿವೆ.