ಉಳ್ಳಾಲ: ಮೈಸೂರು ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ತಾವು ಕಲಿತ ಎಲ್ಲಾ ಶಾಲೆಗಳು, ಸೇವಾಶ್ರಮಕ್ಕೆ 25 ಲಕ್ಷ ರೂ. ಅನುದಾನ ಹಂಚಿಕೆ ಮಾಡಿ ಸಾಮಾಜಿಕ ಬದ್ಧತೆ ತೋರ್ಪಡಿಸಿದ್ದಾರೆ ಎಂದು ಟಿ.ಜಿ.ರಾಜಾರಾಂ ಭಟ್ ಹೇಳಿದರು.
ಬೋಳಿಯಾರ್ ಅಮರ್ ದೀಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಆರ್ಎಸ್ ನಿಧಿಯಿಂದ ಬಿಡುಗಡೆಗೊಳಿಸಲಾದ 25 ಲಕ್ಷ ರೂ. ಅನುದಾನ ಮಂಗಳೂರು ಕ್ಷೇತ್ರದ 12 ಶಾಲೆಗಳು ಮತ್ತು ಎರಡು ಸೇವಾಶ್ರಮಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಮೈಸೂರು ಇಂಡಸ್ಟ್ರೀಸ್ ಸಂಸ್ಥೆಯ ಲಾಭದ ಹಣ ತಮ್ಮ ಕ್ಷೇತ್ರಕ್ಕೂ ತಂದು ಅಭಿವೃದ್ಧಿಗೆ ಬಳಸಲು ಸಾಧ್ಯ ಎಂದು ತೋರಿಸುವ ಜೊತೆಗೆ ತಾವು ಕಲಿತ ಎಲ್ಲಾ ಶಾಲೆಗಳು, ಸೇವಾಶ್ರಮಕ್ಕೆ ನೀಡುವ ಮೂಲಕ ಅಧ್ಯಕ್ಷ ಸಂತೋಷ್ ಕುಮಾರ್ ಸಾಮಾಜಿಕ ಬದ್ಧತೆ ತೋರ್ಪಡಿಸಿದ್ದಾರೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಇದುವರೆಗೆ ಎಂಇಇಎಲ್ ಮತ್ತು ಕಿಯೋನಿಕ್ಸ್ ಸಂಸ್ಥೆಗೆ ಶಾಸಕರೇ ಅಧ್ಯಕ್ಷರಾಗುತ್ತಿದ್ದರೆ. ಬಿಜೆಪಿ ಆಡಳಿತ ಪ್ರಥಮ ಬಾರಿಗೆ ಪಕ್ಷದ ಕಾರ್ಯಕರ್ತರಿಗೆ ನೀಡಿದೆ. ಎಂಇಇಎಲ್ನಿಂದ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಬರುವ ಜೊತೆಗೆ 36 ಮಂದಿಗೆ ಉದ್ಯೋಗವಕಾಶವೂ ದೊರಕುವಂತಾಗಿದೆ ಎಂದು ಹೇಳಿದರು.