ಮಂಗಳೂರು: ಹರಿದಾಸರು ಹರಿಕಥೆಗಳನ್ನು ಹೇಳುವಾಗ ಜೊತೆಗೊಂದಷ್ಟು ಕಿರು ಉಪಕಥೆಗಳನ್ನು ಹೇಳುತ್ತಾರೆ. ಇವು ಮನುಷ್ಯನ ಬದುಕು ಕಟ್ಟಿಕೊಡುವ ಮೌಲ್ಯಾಧಾರಿತ, ಸಂಸ್ಕಾರಯುತ ಕಥೆಗಳಾಗಿವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಇಂದು ಮಾದಕ ವ್ಯಸನಗಳಿಗೆ ಬಲಿಯಾಗುವ ಯುವ ಜನಾಂಗಗಳಿಗೆ ನೈತಿಕ ಮೌಲ್ಯಗಳನ್ನು ತಿಳಿಸುವ ಹಾಗೆ ತುಳುವಿನಲ್ಲಿ ಹರಿಕಥೆಗಳು ನಡೆದಲ್ಲಿ ಅವರ ಜೀವನ ತಹಬದಿಗೆ ಬರಲು ಸಾಧ್ಯ ಎಂದು ಹೇಳಿದರು. ಹಿಂದೆ ಹಿರಿಯರು ಮಾತ್ರ ಹರಿಕಥೆಗಳನ್ನು ಹೇಳುತ್ತಿದ್ದರು. ಇದೀಗ ಸಣ್ಣ ಸಣ್ಣ ಯುವಕರೂ ಇದರೆಡೆಗೆ ಆಕರ್ಷಿತರಾಗಿದ್ದಾರೆ. ಈ ಮೂಲಕ ನಮ್ಮ ದೇಶದ ಲಲಿತ ಕಲೆಗಳು ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ. ಪ್ರತಿಭೆಗಳನ್ನು ಒರೆಗೆ ಹೆಚ್ಚುವಂತಹ ಕೆಲಸವಾಗಬೇಕು ಎನ್ನುವ ದೃಷ್ಟಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿಯೂ ಸರಕಾರದ ನಿಯಮ ಪಾಲಿಸಿ ಕಾರ್ಯಕ್ರಮ ಆಯೋಜಿಸಿತ್ತು ಎಂದರು.
ಇದೀಗ ಮಂಗಳೂರಿನ ಹರಿಕಥಾ ಪರಿಷತ್ ನ ಸಹಯೋಗದೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 10 ದಿನಗಳ ಹರಿಕಥೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಸೆ.21 ರಿಂದ ಸೆ.30 ರವರೆಗೆ ತುಳುಭವನದ ಸಿರಿಚಾವಡಿಯಲ್ಲಿ ಆಯೋಜಿಸಲಾಗಿದೆ. ದಿನವೂ ಅಪರಾಹ್ನ 3ರಿಂದ 6ಗಂಟೆಯವರೆಗೆ ಹರಿಕಥಾ ಕಾಲಕ್ಷೇಪ ನಡೆಯಲಿದೆ. ವಿಶೇಷವಾಗಿ 8 ಪುರಾಣ ಕಥೆಗಳನ್ನು ತುಳುವಿನಲ್ಲಿ ಹರಿಕಥಾ ಕಾಲಕ್ಷೇಪವಾಗಿ ನಡೆಸಿದರೆ, ತುಳುವಿನ ಕ್ರಾಂತಿವೀರರಾದ ಅಗೋಳಿ ಮಂಜಣ್ಣ ಹಾಗೂ ಕೋಟಿ-ಚೆನ್ನಯರ ಹರಿಕಥೆಯು ಕನ್ನಡದಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ದಯಾನಂದ ಕತ್ತಲ್ ಸಾರ್ ಹೇಳಿದರು.