ಮಂಗಳೂರು: ನಾಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಐಸಕ್ ವಾಸ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಾಣಿಜ್ಯ ನಗರವಾಗಿರುವ ಮಂಗಳೂರಿನಲ್ಲಿ ವ್ಯವಹಾರ ವೃದ್ದಿಗೆ ದೊಡ್ಡ ತೊಡಕಾಗಿರುವುದು ಸಂಚಾರ ಅವ್ಯವಸ್ಥೆ. ಬಸ್ಸು, ರೈಲು, ವಿಮಾನ ಸಂಪರ್ಕ ಇದ್ದರೂ ಸುಸಜ್ಜಿತ ಸಂಪರ್ಕ ವ್ಯವಸ್ಥೆ ಕೊರತೆ ಇದೆ. ಇದಕ್ಕಾಗಿ ಹಳೆ ಬೇಡಿಕೆಯಾಗಿರುವ ಬೆಂಗಳೂರು-ಮಂಗಳೂರು ಮಧ್ಯೆ ಟನೆಲ್ ನಿರ್ಮಾಣ ಯೋಜನೆ ಮಾಡಬೇಕಾಗಿದೆ. ರಾಜಧಾನಿ ಬೆಂಗಳೂರು ಸಂಪರ್ಕಕ್ಕೆ ಟನೆಲ್ ನಿರ್ಮಾಣದಿಂದ ಬಹಳಷ್ಟು ಕೊಡುಗೆಯಾಗಲಿದೆ. ಆದರೆ ಇದಕ್ಕೆ ಹಣವನ್ನು ಮಂಜೂರು ಮಾಡಬೇಕಾದದ್ದು ಕೇಂದ್ರ ಸರಕಾರ. ಈ ಬಜೆಟ್ನಲ್ಲಿ ಅದಕ್ಕೆ ಹಣ ತೆಗೆದಿರಿಸುವ ವಿಶ್ವಾಸ ಹೊಂದಲಾಗಿದೆ ಎಂದರು.
ಜೊತೆಗೆ ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಸಂಚಾರದ ಉತೇಜನಕ್ಕೂ ಬಜೆಟ್ನಲ್ಲಿ ನಿರೀಕ್ಷೆ ಹೊಂದಲಾಗಿದೆ. ಮಂಗಳೂರಿನಲ್ಲಿ ಕೈಗಾರಿಕೆಗಳಿಗೆ ಬೇಕಾದ ಜಾಗಗಳು ಸಿಗುತ್ತಿಲ್ಲ ಎಂಬುದು ಮತ್ತೊಂದು ಸಮಸ್ಯೆ. ಇದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಈ ಬಜೆಟ್ನಲ್ಲಿ ಬರಲಿದೆ ಎಂಬುದು ಮತ್ತೊಂದು ನಿರೀಕ್ಷೆಯಾಗಿದೆ. ಸಾಗರಮಾಲ ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳುವುದು ಹಾಗೂ ಎಪಿಎಂಸಿ ಹೊಸ ಕಾಯ್ದೆಯಿಂದ ರೈತರಿಗೆ ಪ್ರಯೋಜನವಿಲ್ಲ, ರಫ್ತು ಮಾಡುವವರಿಗೂ ಉಪಯೋಗ ಇಲ್ಲ. ವ್ಯಾಪಾರಿಗಳು ಇದರಿಂದ ತುಂಬಾ ಬಳಲುತ್ತಿದ್ದಾರೆ ಈ ಬಗ್ಗೆಯು ಸರಿಯಾದ ನಿರ್ಧಾರ ಕೈಗೊಳ್ಳಬೇಕೆಂಬ ನಿರೀಕ್ಷೆಗಳನ್ನು ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.