ಉಳ್ಳಾಲ: ಮೋದಿ ಸರ್ಕಾರ ತನ್ನ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಸಾರ್ವಜನಿಕ ಉದ್ಯಮಗಳನ್ನು ಖಾಸಗಿ ಬಂಡವಾಳಶಾಹಿಗಳ ಕೈಗೆ ನೀಡುತ್ತಿದೆ ಎಂದು ಆರೋಪಿಸಿ ಸಿಪಿಐಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಿಪಿಐಎಂ ನೇತೃತ್ವದಲ್ಲಿ ದೇಶಾದ್ಯಂತ ಆಗಸ್ಟ್ 20 ರಿಂದ 29 ರವರೆಗೆ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹ ಹಿನ್ನೆಲೆ ಇಂದು ಕುತ್ತಾರ್ ತೇವುಲ ಪ್ರದೇಶದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ಸಹಾಯಕ್ಕೆ ಮುಂದಾಗಬೇಕಾದ ಸರ್ಕಾರ ಭಾವನಾತ್ಮಕ ವಿಚಾರಗಳನ್ನು ತಂದು ಜನರನ್ನು ವಂಚಿಸುತ್ತಿದೆ. ಸಿಪಿಐಎಂ ಕೇಂದ್ರ ಸರ್ಕಾರದ ಮುಂದಿಟ್ಟ 18 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಕಾರ್ಮಿಕ ನೇತಾರ ಜಯಂತ್ ನಾಯ್ಕ್, ಸಿಪಿಐಎಂ ಮುನ್ನೂರು ಗ್ರಾಮ ಕಾರ್ಯದರ್ಶಿ ಮಹಾಬಲ್ ಟಿ, ವಿಶ್ವನಾಥ್ ತೇವುಲ, ಜಯರಾಮ್ ತೇವುಲ, ಶೇಖರ್ ಕುಂದರ್, ಸತೀಶ್ ಕುಲಾಲ್, ಡಿವೈಎಫ್ಐ ಮುಖಂಡರಾದ ಸುನೀಲ್ ತೇವುಲ, ಜೀವನ್ ರಾಜ್, ಸುರೇಶ್ ತಲೆನೀರು, ಭರತ್ ಉಪಸ್ಥಿತರಿದ್ದರು.