ಮಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಆಗುಂತಕರು, ಗೋಣಿ ಚೀಲ ಮುಸುಕು ಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ 7ರ ಹೊತ್ತಿಗೆ ಮೂವರು ಬಾಲಕರು ನಗರದ ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಸಮೀಪದಲ್ಲಿರುವ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು, ಬಾಲಕರ ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ಸಂದರ್ಭ ಓರ್ವ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ.
ಇದರಿಂದ ಆಗುಂತಕರು ಕಂಗೆಟ್ಟಿದ್ದು, ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಂಚಾಡಿ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು, ಮಕ್ಕಳ ತಲೆಗೆ ಗೋಣಿ ಮುಸುಕು ಹಾಕುವ ದೃಶ್ಯ ದಾಖಲಾಗಿದೆ.
ಡಿಸಿಪಿ ಹರಿರಾಂ ಶಂಕರ್, ಕಂಕನಾಡಿ ಇನ್ಸ್ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಲಕರಿಂದ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆದರು.
ಅಳಕೆಯಲ್ಲಿ ಮತ್ತೊಂದು ಕೃತ್ಯ :
ಮಂಗಳೂರಿನ ಅಳಕೆಯಲ್ಲಿ ಮಹಿಳೆಯೊಬ್ಬರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ, ಮಕ್ಕಳ ಅಪಹರಣದ ವದಂತಿ ಹಬ್ಬಿ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮಹಿಳೆಯು ಉತ್ತರ ಭಾರತದವರಾಗಿದ್ದು, ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗಳಿಗೆ ತೆರಳಿ ಹಣ ಕೇಳುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ ಆಟವಾಡುತ್ತಿದ್ದ ಮಕ್ಕಳ ಫೋಟೊ ತೆಗೆದು ವಾಟ್ಸಪ್ನಲ್ಲಿ ಕಳುಹಿಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ಯಾರೂ ಲಿಖಿತವಾಗಿ ದೂರು ನೀಡಿದ ಕಾರಣ, ಬಂದರು ಠಾಣೆ ಪೊಲೀಸರು ಮಹಿಳೆಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.