ಕಡಬ : ತಾಲೂಕಿನ ನೆಲ್ಯಾಡಿಯ ಕೊಣಾಲು ಗ್ರಾಮದಲ್ಲಿರುವ ಕೊಣಾಲು ದೇವತೆ ಕ್ಷೇತ್ರದಲ್ಲಿ ಜಾತಿ ಹೆಸರಿನಲ್ಲಿ ಸಾಮಾಜಿಕ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ನಿಯೋಗ ದೈವಸ್ಥಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದೆ.
ದೈವಸ್ಥಾನದಲ್ಲಿ ಉತ್ಸವಾದಿಗಳು ನಡೆದಿದ್ದು, ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ನಾಗೇಶ್ ತಂತ್ರಿಯವರಿಗೆ ಮಾಹಿತಿ ನೀಡಿದ್ದ ಬಿಲ್ಲವ ಸಂಘದ ನಿಯೋಗ ಬುಧವಾರ ಕ್ಷೇತ್ರಕ್ಕೆ ತೆರಳಿ ತಂತ್ರಿಗಳ ಸಮ್ಮುಖದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಅವರಲ್ಲಿ ಸಾಮಾಜಿಕ ತಾರತಮ್ಯದ ಬಗ್ಗೆ ವಿವರಣೆ ಕೇಳಿದರು.
ಕೆಲ ನಿರ್ದಿಷ್ಟ ಜಾತಿ ಸಮುದಾಯಗಳನ್ನು ಕ್ಷೇತ್ರದ ಧಾರ್ಮಿಕ ವಿಧಿಗಳಿಂದ ದೂರವಿಟ್ಟಿರುವ ಬಗ್ಗೆ ಮತ್ತು ಈ ಸಮುದಾಯಗಳ ಸ್ಥಳೀಯ ಭಕ್ತರಿಗೆ ಪ್ರಸಾದ ನೀಡದಿರುವ ಬಗ್ಗೆ ಮಾಹಿತಿ ಕೇಳಲಾಗಿದೆ. ಕೊರೊನಾ ಲಾಕ್ಡೌನ್ ಪೂರ್ವದಲ್ಲಿ ಇದೇ ಕ್ಷೇತ್ರದಲ್ಲಿ ಇಂತದ್ದೇ ತಾರತಮ್ಯ ನಡೆದಿತ್ತು ಎನ್ನಲಾಗಿದ್ದು, ಈ ಸಮಯದಲ್ಲಿ ಸಮುದಾಯದ ನಾಯಕರು ಭೇಟಿ ನೀಡಿ, ಸಾಮಾಜಿಕ ತಾರತಮ್ಯ ಮಾಡದಂತೆ ತಿಳಿಸಿದ್ದರು.
ಕೊಣಾಲು ದೇವತೆ ಕ್ಷೇತ್ರ ವ್ಯಾಪ್ತಿಯ ಸುಮಾರು 20 ಕುಟುಂಬಗಳನ್ನು ಕ್ಷೇತ್ರದಿಂದ ದೂರ ಇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅವರು ಕ್ಷೇತ್ರದ ಉತ್ಸವಕ್ಕೆ ಭಕ್ತಿಪೂರ್ವಕ ವಂತಿಗೆ ನೀಡಲು ಮುಂದೆ ಬಂದರೂ ಸ್ವೀಕರಿಸಿಲ್ಲ. ಹೊರೆ ಕಾಣಿಕೆ ತಂದೊಪ್ಪಿಸಿದರೂ ಇತರರಿಗೆ ನೀಡಿದಂತೆ ರಶೀದಿ ನೀಡಿಲ್ಲ.
ಪೂಜಾ ಸಂದರ್ಭ ಆರತಿ ಪಡೆಯಲು ಬಂದರೂ ಆರತಿ ನೀಡದೆ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಅಧ್ಯಕ್ಷರಲ್ಲಿ ಕಾರಣ ಕೇಳಿದ್ರೆ, ಹಿಂದಿನ ಕಾಲದ ಸಂಪ್ರದಾಯ ನಾವು ಪಾಲಿಸುತ್ತಿದ್ದೇವೆ ಎಂಬ ಉತ್ತರ ನೀಡುತ್ತಿದ್ದಾರೆ.
ಓದಿ: ಉಜಿರೆ ಬಾಲಕನ ಅಪಹರಣ ಪ್ರಕರಣ: ಇನ್ನೋರ್ವ ಆರೋಪಿ ಬಂಧನ
ಭಕ್ತರನ್ನು ಜಾತಿಯ ಹೆಸರಿನಲ್ಲಿ ದೂರ ಇರಿಸುವುದು ಸಂವಿಧಾನ ಪ್ರಕಾರ ಅಕ್ಷಮ್ಯ ಅಪರಾಧ. ಹೀಗಿದ್ದರೂ ಅಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ನಾವು ತಂತ್ರಿಗಳ ಸಮ್ಮುಖದಲ್ಲೇ ಮನವಿ ಮಾಡಿ, ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೇವೆ. ನಿಯೋಗದಲ್ಲಿ ಹೋದ ನಮಗೆ ತಂತ್ರಿಗಳ ಮುಖೇನ ಪ್ರಸಾದ ನೀಡಲಾಗಿದ್ದರೂ, ಸ್ಥಳೀಯ ಕುಟುಂಬಗಳ ಕಡೆಗಿನ ತಾರತಮ್ಯ ನಿಂತಿಲ್ಲ ಎಂಬುದಾಗಿ ನಿಯೋಗದಲ್ಲಿನ ಬಿಲ್ಲವ ಸಂಘದ ಅಧ್ಯಕ್ಷರು ಆರೋಪಿಸಿದರು.