ಪುತ್ತೂರು: ಸಹಕಾರಿ ಸಂಘಗಳು ಆರ್ಥಿಕ ಮತ್ತು ಸಾಮಾಜಿಕ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಶ್ವೇತ ಕ್ರಾಂತಿ ಮತ್ತು ಹಸಿರು ಕ್ರಾಂತಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅಪಾರವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅಭಿಪ್ರಾಯ ಪಟ್ಟರು. ಪುತ್ತೂರಿನ ಒಕ್ಕಲಿಗಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ನಡೆದ ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ಪ್ರಜಾಪ್ರಭುತ್ವದ ತೊಟ್ಟಿಲುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಬದ್ಧತೆಯುಳ್ಳ ವ್ಯವಹಾರಿಕ ಸಂಸ್ಥೆಗಳು ಎಂಬ ಕೀರ್ತಿಗೆ ಪಾತ್ರವಾಗಿವೆ ಎಂದರು. ಅಡಕೆ ಬೆಳೆಗಾರರೂ ಸೇರಿದಂತೆ ಎಲ್ಲ ರೈತರ ಉನ್ನತಿಯಲ್ಲಿ ಸಹಕಾರಿ ಸಂಘಗಳ ಪಾತ್ರವಿದೆ. ಹಾಗೆಯೇ ಕರಾವಳಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ಸಹಕಾರಿ ಸಂಘಗಳು ರೈತರಿಗೆ ಶೀಘ್ರವೇ ಸ್ಪಂದಿಸುತ್ತಿರುವುದೇ ಕಾರಣ ಎಂದು ಹೇಳಿದರು.
ಪುತ್ತೂರಿನಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಕ್ಯಾಂಪ್ಕೋ ಏಷ್ಯಾದ ಅತಿದೊಡ್ಡ ಚಾಕಲೇಟ್ ಫ್ಯಾಕ್ಟರಿ ಸ್ಥಾಪಿಸಿತ್ತು. ಈಗ ಅದನ್ನೇ ದೇಶದ ಇತರ ಕಡೆ ಮಾದರಿಯಾಗಿ ಬಳಸಬಹುದು ಎಂದು ಕೇಂದ್ರ ಸರಕಾರ ಹೇಳುತ್ತಿದೆ ಎಂದು ಹೇಳಿದ ಅವರು, ಪುತ್ತೂರು ಸಹಕಾರಿ ರಂಗದ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ ಎಂದರು.
ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕೃಷಿಕರು ತಮ್ಮ ಹಾದಿಯಲ್ಲಿ ಕ್ರೀಯಾತ್ಮಕತೆ ಬೆಳೆಸಿಕೊಳ್ಳುವುದು ಅಗತ್ಯವಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ಯಶಸ್ಸಿನ ಹಾದಿಯಿಡಿಯಬೇಕು ಎಂದರು.
ಇನ್ನು ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಸೇರಿದಂತೆ ಇತರ ಗಣ್ಯರು ಇದ್ದರು.