ಮಂಗಳೂರು/ಸುಬ್ರಹ್ಮಣ್ಯ: ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವು ಇಂದು ರಾತ್ರಿ 8 ಗಂಟೆಯ ವೇಳೆಗೆ ಯಶಸ್ವಿಯಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿತು.
ಉಡುಪಿಯ ಕೋಟೇಶ್ವರದಿಂದ ಸೋಮವಾರದಂದು ಹೊರಟ ನೂತನ ಬ್ರಹ್ಮರಥವು ಮಂಗಳವಾರ ರಾತ್ರಿ ಕಡಬ ತಾಲೂಕಿನ ಬಲ್ಯಕ್ಕೆ ಆಗಮಿಸಿದ್ದು, ಬುಧವಾರದಂದು ಬೆಳಗ್ಗೆ ಕಡಬದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬಲ್ಯದಿಂದ ಸುಬ್ರಹ್ಮಣ್ಯದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಕಳಾರ ಹಾಗೂ ಮರ್ಧಾಳದಲ್ಲಿ ಮುಸ್ಲಿಂ ಬಾಂಧವರು ಬ್ರಹ್ಮರಥ ಆಗಮಿಸಿದ ವೇಳೆ ಸಿಹಿ ತಿಂಡಿ ಹಂಚಿ ಭಾವೈಕ್ಯತೆ ಮೆರೆದರು.
ಸಂಜೆ ಕುಮಾರಧಾರ ತಲುಪಿದ ಬ್ರಹ್ಮರಥಕ್ಕೆ ಕ್ಷೇತ್ರದ ಆನೆ ‘ಯಶಸ್ವಿ’ ಸ್ವಾಗತ ಕೋರುವ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಂಡಿತು. ಎಂಟು ಗಂಟೆಯ ವೇಳೆಗೆ ಯಶಸ್ವಿಯಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ತಲುಪಿತು.