ಮಂಗಳೂರು: ಮೊದಲಿನ ಸ್ಥಿತಿಗೆ ಮಂಗಳೂರನ್ನು ತರಬೇಕೆಂಬ ದೃಷ್ಟಿಯಿಂದ ಇಂದು ನಗರದಲ್ಲಿ ಮಹತ್ವದ ಶಾಂತಿ ಸಭೆಯನ್ನು ನಡೆಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಮಾಜಿ ಶಾಸಕರು ಹಾಗೂ ಎಲ್ಲಾ ಸಮುದಾಯದ ಮುಖಂಡರನ್ನು ಸೇರಿಸಿ ಶಾಂತಿ ಸಭೆ ನಡೆಸುವುದಾಗಿ ತಿಳಿಸಿದರು. ಜನರಿಗೆ ಅನುಕೂಲವಾಗುವಂತಹ ರೀತಿ ನಗರವನ್ನು ಯಥಾ ಸ್ಥಿತಿಗೆ ತರಲು ಪ್ರಯತ್ನ ಪಡುತ್ತೇನೆಂದು ಹೇಳಿದರು.
ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ನಾನು ಮಂಗಳೂರಿಗೆ ಬಂದಿದ್ದೇನೆ. ಜೊತೆಗೆ ಅಧಿಕಾರಿಗಳಿಗೆ ಸಮರ್ಪಕ ಮಾರ್ಗಸೂಚಿಯನ್ನು ನೀಡಲಿದ್ದೇನೆ ಎಂದರು. ಎಲ್ಲಾ ಸಮುದಾಯದ ಜನರನ್ನು ಭೇಟಿಯಾಗಿ ಇಲ್ಲಿನ ಪರಿಸ್ಥಿತಿಯನ್ನ ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುವುದು. ಮೊನ್ನೆಯ ಪ್ರಕರಣದ ಬಳಿಕ ಎಲ್ಲಾ ಸಮುದಾಯದವರು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.