ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ನಗರದ ಟೋಕಿಯೋ ಮಾರ್ಕೆಟ್ನಲ್ಲಿರುವ ಬಟ್ಟೆ ಮಳಿಗೆಗೆ ದಾಳಿ ನಡೆಸಿರುವ ಮೂವರು ಆರೋಪಿಗಳು, ಹಣ ನೀಡಲು ಒತ್ತಾಯಿಸಿರೋದಾಗಿ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ಟೋಕಿಯೋ ಮಾರ್ಕೆಟ್ನಲ್ಲಿರುವ ಸಾಗರ್ ವೆಡ್ಡಿಂಗ್ ಎಂಬ ಬಟ್ಟೆ ಮಳಿಗೆಗೆ ಬುಧವಾರ ಬೆಳಗ್ಗೆ 9ರ ವೇಳೆಗೆ ಏಕಾಏಕಿ ಬಂದ ಮೂವರು, ತಮ್ಮನ್ನು ಮಂಗಳೂರು ಮನಪಾ ಅಧಿಕಾರಿಗಳೆಂದು ಹೇಳಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮಳಿಗೆ ತೆರೆದಿರೋದು ಯಾಕೆ ಎಂದು ಪ್ರಶ್ನಿಸಿರುವ ಅವರು, 50 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಎಲ್ಲವನ್ನೂ ಸರಿಪಡಿಸಲಾಗುವುದೆಂದು ಹೇಳಿ 10 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದಾರೆ.
ಈ ಸಂದರ್ಭ ಅಲ್ಲಿ ಜನ ಜಮಾಯಿಸಿದ್ದು, ಬಂದವರು ಮನಪಾ ಅಧಿಕಾರಿಗಳ ಸೋಗಿನಲ್ಲಿ ಬಂದಿರೋದಾಗಿ ತಿಳಿದು ಬಂದಿದೆ. ತಕ್ಷಣ ಈ ಬಗ್ಗೆ ಸಾಗರ್ ವೆಡ್ಡಿಂಗ್ ಮಾಲೀಕ ಅಬ್ದುಲ್ ರಹ್ಮಾನ್ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.