ಬೆಳ್ತಂಗಡಿ: ಕಳೆದ ವರ್ಷ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತದ ಸಂದರ್ಭದಲ್ಲಿ ಬೆಳ್ತಂಗಡಿ ರಿಲೀಫ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹ ಮಾಡಲಾಗಿದೆ. ಈಗ ಒಂದು ವರ್ಷ ಕಳೆದರೂ, ಯಾರಿಗೂ ಒಂದು ರೂಪಾಯಿ ಹಣ ವಿತರಿಸಿಲ್ಲ. ಇದರಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಶಾಸಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದಾರೆ.
ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ, ರಾಜ್ಯಪಾಲರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೇರಿದಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಸೇವಾ ಸಹಕಾರಿ ಬ್ಯಾಂಕ್ಗಳಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಲಾಗಿದೆ ಎಂದರು.
ಪ್ರವಾಹ ಪೀಡಿತರಿಗೆ ಸರ್ಕಾರದಿಂದಲೂ ಸರಿಯಾಗಿ ಸೌಲಭ್ಯಗಳು ದೊರೆತಿಲ್ಲ. ಸಂತ್ರಸ್ತರ ಪಟ್ಟಿ ತಯಾರಿಕೆಯಲ್ಲಿಯೂ ಅಕ್ರಮವಾಗಿದೆ. ಯಾವುದೇ ತೊಂದರೆಯಾಗದವರಿಗೆ ಹೊಸ ಮನೆ ಮಂಜೂರು ಮಾಡಲಾಗಿದೆ. ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಬೆಳ್ತಂಗಡಿಯಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆ. ಹಿಂದೆ ಮಂಜೂರಾಗಿದ್ದ ಕಾಮಗಾರಿಗಳಲ್ಲಿಯೂ ಈಗ ಕಮಿಷನ್ ಕೇಳುತ್ತಿದ್ದಾರೆ. ಕೆಲವರು ಕಮಿಷನ್ ಕೊಡಲಾಗದೇ ಕೆಲಸಗಳನ್ನುಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾದರೆ ಕಮಿಷನ್ ನೀಡಬೇಕು ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ನಿಂದ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಮನೋಹರ್ ಕುಮಾರ್ ಇಳಂತಿಲ ಉಪಸ್ಥಿತರಿದ್ದರು.