ಸುಳ್ಯ: ಸುಳ್ಯದ ಅರಂಬೂರು ಭಾರದ್ವಾಜ ಆಶ್ರಮದಲ್ಲಿ ವೇದಾಧ್ಯಯನ ಅಭ್ಯಸುತ್ತಿದ್ದ ವಿದ್ಯಾರ್ಥಿ ಸ್ನಾನಕ್ಕೆಂದು ಪಯಸ್ವಿನಿ ನದಿಗೆ ಇಳಿದಾಗ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ.
ಪುತ್ತೂರು ತಾಲೂಕಿನ ಕೌಡಿಚ್ಚಾರಿನ ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ ಭಟ್ (18) ಸ್ನಾನಕ್ಕೆಂದು ನದಿಗೆ ಇಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ವಿದ್ಯಾರ್ಥಿ.
ಉದನೇಶ್ವರ ಸೇರಿದಂತೆ ಭಾನುವಾರ ಸಂಜೆ ವೇದಾಧ್ಯಯನ ತರಗತಿಯ 7 ಜನ ವಿದ್ಯಾರ್ಥಿಗಳು ಅರಂಬೂರಿನ ಪಯಸ್ವಿನಿ ನದಿಗೆ ಸ್ನಾನಕ್ಕಿಳಿದಿದ್ದರು. ಆ ವೇಳೆ ಉದನೇಶ್ವರ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗ್ತಿದೆ. ಆದರೆ ಇದು ಅವರ ಜೊತೆಗೆ ಇದ್ದವರ ಗಮನಕ್ಕೆ ಬಂದಿರಲಿಲ್ಲ. ಉದನೇಶ್ವರ ಕಾಣದೇ ಇದ್ದುದರಿಂದ ಆತ ಆಶ್ರಮಕ್ಕೆ ತೆರಳಿರಬೇಕೆಂದು ಭಾವಿಸಿದ್ದರು.
ಉದನೇಶ್ವರನ ಚಪ್ಪಲಿ ನದಿಯ ಪಕ್ಕದಲ್ಲಿದ್ದುದರಿಂದ ಅನುಮಾನಗೊಂಡು ಆಶ್ರಮದ ಹಿರಿಯರಿಗೆ ತಿಳಿಸಿದರು. ಬಳಿಕ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಡಿದಾಗ ರಾತ್ರಿ ವೇಳೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.