ಮಂಗಳೂರು: ಪೊಲೀಸ್ ಕಾನ್ ಸ್ಟೇಬಲ್ಗಳು ಮನೆ ಮನೆ, ಬೀದಿ ಬೀದಿಗಳಲ್ಲಿ ಗಸ್ತು ತಿರುಗುವ ಬೀಟ್ ವ್ಯವಸ್ಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಂಗಳೂರಿನ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ಕನಸಿನ 'ಮೈ ಬೀಟ್ ಮೈ ಪ್ರೈಡ್' (ನನ್ನ ಗಸ್ತು ನನ್ನ ಹೆಮ್ಮೆ) ಹೊಸ ಬೀಟ್ ವ್ಯವಸ್ಥೆಯಂತೆ ತಾವೇ ಕಾನ್ ಸ್ಟೇಬಲ್ಗಳ ಜೊತೆ ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ಬೀಟ್ ಸಂಖ್ಯೆ 20ರ ಶಕ್ತಿನಗರದಲ್ಲಿ ಗಸ್ತು ತಿರುಗಿದರು.
ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಬೀಟ್ ಪೊಲೀಸ್ ಸಿ.ಎಂ. ಮದನ್ ಅವರೊಂದಿಗೆ ಸುಮಾರು ಒಂದುವರೆ ಕಿ.ಮೀ. ನಡೆದುಕೊಂಡು ಗಸ್ತು ತಿರುಗಿದರು. ಈ ಸಂದರ್ಭ ಪೊಲೀಸ್ ಆಯುಕ್ತರು ಓರ್ವರ ಪಾಸ್ ಪೋರ್ಟ್ ದಾಖಲೆಯನ್ನು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು. ಕೆಲವು ದೂರುದಾರರ ಮನೆಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು. ಅಲ್ಲದೆ ರೌಡಿಶೀಟರ್ಗಳ ಮನೆಗೆ ತೆರಳಿ ಅವರಿಗೆ ಮುಂದೆ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಖಡಕ್ ವಾರ್ನಿಂಗ್ ನೀಡಿದರು.
ಬಳಿಕ ಅವರು ಪೊಲೀಸ್ ಅಧಿಕಾರಿಗಳ ಕ್ವಾಟರ್ಸ್ಗೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ಮಹಾನಗರ ಪಾಲಿಕೆಯ ನೀರು ಬರುತ್ತಿಲ್ಲ, ಮಣ್ಣು ಅಗೆದು ಅಲ್ಲಿಯೇ ಹಾಕಲಾಗಿದೆ ಎಂಬ ದೂರುಗಳನ್ನು ನೀಡಿದರು. ಈ ಸಂದರ್ಭ ಪೊಲೀಸ್ ಆಯುಕ್ತರು ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು. ನಿಮಗೆ ಹೊಸ ಮನೆಗಳನ್ನು ಕೊಡಲಾಗಿದೆ. ನಿಮ್ಮ ಮನೆಯ ಮಣ್ಣನ್ನು ನೀವೇ ತೆಗೆಯಬೇಕು. ಇದೇ ರೀತಿ ಎಲ್ಲವನ್ನೂ ನಾವೇ ಮಾಡಿದರೆ ಎಸಿಪಿ ಬಂದು ಕಸ ಹೊಡಿಬೇಕೆಂದು ಹೇಳುತ್ತೀರಾ. ಸ್ವಲ್ಪ ಶ್ರಮದಾನ ಮಾಡಿ ಮನೆಯ ಸುತ್ತಮುತ್ತಲೂ ಶುಚಿಯಾಗಿಟ್ಟುಕೊಳ್ಳಿ, ಈ ದೇಶದಲ್ಲಿ ಪ್ರಧಾನಿಯವರೇ ಕಸ ಎತ್ತುತ್ತಾರೆ. ನೀವು ಹಿಂಜರಿದರೆ ಹೇಗೆ ಎಂದು ಪಾಠ ಮಾಡಿದರು.
ಈ ಸಂದರ್ಭ ಪೊಲೀಸ್ ಬೀಟ್ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, ಬೀಟ್ ಅಂದರೆ ಕಾಂಪ್ಯಾಕ್ಟ್ ಯುನಿಟ್. ಹಿಂದೆ ಬೀಟ್ ಎರಡು ಮೂರು ಕಿ.ಮೀ. ಇರುತ್ತಿತ್ತು. ಇದರಿಂದ ಓಡಾಡಲು ಬಹಳ ಕಷ್ಟವಿತ್ತು. ಆದರೆ ಈಗ ಅದನ್ನು ಕಿರಿದುಗೊಳಿಸಿ ಒಂದುವರೆ ಕಿ.ಮೀ. ಒಳಗೆ ಬರುವಂತೆ ಬೀಟ್ ವ್ಯವಸ್ಥೆ ಮಾಡಲಾಗಿದೆ. ಒಂದು ಗಂಟೆಯೊಳಗೆ ಆ ಇಡೀ ಪ್ರದೇಶದಲ್ಲಿ ಗಸ್ತು ತಿರುಗಾಡಬಹುದು. ಆದ್ದರಿಂದ ಬಂದೋಬಸ್ತಿನ ಒತ್ತಡ ಇದ್ದರೂ ಮತ್ತೆ ಮತ್ತೆ ಗಸ್ತು ತಿರುಗಲು ಅನುಕೂಲವಾಗುತ್ತದೆ ಎಂದರು.