ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಇಂದು ದಾಖಲೆಯ ಪ್ರಮಾಣದಲ್ಲಿ 90 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದರಲ್ಲಿ ಸೌದಿ ಅರೇಬಿಯಾ, ಕುವೈತ್ ಹಾಗೂ ದುಬೈನಿಂದ ಬಂದ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದೇ ರೀತಿ Influenza Like Illness ಪ್ರಕರಣದಲ್ಲಿ 19 ಮಂದಿ, ಸಾರಿ (Severe Acute Respiratory Influence) ಪ್ರಕರಣದಲ್ಲಿ ಎಂಟು ಮಂದಿ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 31 ಮಂದಿ ಮತ್ತು ಸೋಂಕಿನ ಮೂಲ ಪತ್ತೆಯಾಗದ 17 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.
ಇದರಲ್ಲಿ ಒಂದೇ ಕುಟುಂಬದ ಆರು ಮಕ್ಕಳು, ಮೂವರು ಮಹಿಳೆಯರು, ಓರ್ವ ಪುರುಷ ಸೇರಿ 10 ಮಂದಿಗೆ ಸೋಂಕು ತಗುಲಿದ್ದರೆ, ಉಳ್ಳಾಲದಲ್ಲಿ ರ್ಯಾಂಡಮ್ ತಪಾಸಣೆಯಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಎಂಆರ್ಪಿಎಲ್ನ 7 ಸಿಐಎಸ್ಎಫ್ ಸಿಬ್ಬಂದಿಗೆ ಸೋಂಕು ದೃಢಗೊಂಡಿರುವುದರಿಂದ ಅವರ ಸಂಪರ್ಕದಲ್ಲಿದ್ದ 45 ಮಂದಿಯನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಸೋಂಕು ತಗುಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 33 ಮಂದಿ ಇಂದು ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆ ಗುಣಮುಖ ಎಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ಈವರೆಗೆ 913 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 477 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ 18 ಮಂದಿ ಸಾವನ್ನಪ್ಪಿದ್ದು, 428 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.