ಚಿತ್ರದುರ್ಗ: ಇಡಿ ಕಚೇರಿಯಲ್ಲಿ ಡಿಕೆಶಿ ಕಣ್ಣೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಮಂತ್ರಿ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿ ಅಣ್ಣ ನನ್ನನ್ನು ಕ್ಷಮಿಸಿ ಬಿಡಿ ಎಂದು ಅವರ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಮಾತನಾಡಿದ ಅವರು ನಾನು ಕೈ ಮುಗಿದು ಕೇಳುತ್ತೇನೆ, ಡಿಕೆಶಿ ಅಣ್ಣ ನನ್ನನ್ನು ಕ್ಷಮಿಸಿ ಎಂದಿದ್ದಾರೆ. ಡಿಕೆಶಿ ಅವ್ರು ಕೆಣಕಿ ಮಾತನಾಡುತ್ತಿದ್ದರು, ನಾನು ಕೂಡ ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿನಿಂದ ಯಾವ ಮಾತು ಕೂಡಾ ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದಾರೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು, ಪರ್ಸನಲ್ ಆಗಿ ಅಲ್ಲ. ದಯವಿಟ್ಟು ಅಣ್ಣನವರೇ ನನ್ನ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ್ದಾರೆ.
ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತೆ. ಅವರು ಕಷ್ಟದಲ್ಲಿದ್ದು, ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದ್ರೆ ನೋವಾಗುತ್ತೆ. ನಾನು ಅವರ ಬಗ್ಗೆ ಯಾವುದೇ ರೀತಿ ಮಾತನಾಡಲ್ಲ. ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು. ನನ್ನ ಮಾತಿನಿಂದ ಶಿವಕುಮಾರ್ ಅವರಿಗೆ ನೋವಾಗಿದ್ರೆ, ಕೈ ಮುಗಿದು ಕ್ಷಮೆ ಕೇಳುತ್ತೇನೆ ಕ್ಷಮಿಸಬೇಕು ಎಂದು ಮರುಕ ಪಟ್ಟಿದ್ದಾರೆ.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಿದ್ದಾರೆ, ಮತ್ತೆ ಸಿದ್ದರಾಮಯ್ಯ ಸಿಎಂ ಆಗುವ ಕನಸು ನನಸಾಗಲ್ಲ ಎಂದು ಟಾಂಗ್ ನೀಡಿದ್ದಾರೆ.