ಚಿತ್ರದುರ್ಗ: ಒಬೊಬ್ಬರಿಗೆ ಒಂದೊಂದು ಕೆಲಸದಲ್ಲಿ ನೆಮ್ಮದಿ, ಖುಷಿ ಸಿಗುತ್ತದೆ. ಕೆಲವರು ವಿವಿಧ ಜಾತಿಯ ಪ್ರಾಣಿಗಳನ್ನು ಸಾಕಿದರೆ, ಇನ್ನೂ ಕೆಲವರು ಪಕ್ಷಿಗಳನ್ನು ಸಾಕುತ್ತಾರೆ. ಹಾಗೆಯೇ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಪಾರಿವಾಳ ಸಾಕುವ ಹವ್ಯಾಸವಿದ್ದು, ಹಬ್ಬ ಹರಿದಿನಗಳಲ್ಲಿ ಪಾರಿವಾಳ ಹಾರಿ ಬಿಡುವ ಸ್ಪರ್ಧೆ ಸಹ ನೆಡೆಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸ್ಪರ್ಧೆ ಕಡಿಮೆಯಾಗುತ್ತಿದೆ.
ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿಯ ವೆಂಕಟೇಶ್ ಎಂಬುವರಿಗೆ ಪಾರಿವಾಳ ಸಾಕುವ ಹವ್ಯಾಸವಿದೆ. ಅವರು ಆಯಪ್ಪ ಸ್ವಾಮಿ ಮಾಲೆ ಹಾಕಿದ್ದರು. ಅಂತೆಯೇ ಶಬರಿಮಲೆಗೆ ದೇವರ ದರ್ಶನ ಪಡೆಯಲು ತೆರಳಿದ್ದರು. ಈ ವೇಳೆ, ತಮ್ಮ ಪ್ರೀತಿಯ ಪಾರಿವಾಳವನ್ನು ಸಹ ಬಾಕ್ಸ್ನಲ್ಲಿ ತೆಗೆದುಕೊಂಡು ಹೋಗಿದ್ದರು. ಹಲವಾರು ವರ್ಷಗಳಿಂದ ಪಾರಿವಾಳ ಸಾಕುತ್ತಿರುವ ಅವರು, ಪಕ್ಷಿಯ ಚಲನ ಶಕ್ತಿ, ಸೂಕ್ಷ್ಮ ಗ್ರಹಿಕೆ ಮತ್ತು ನೆನಪಿನ ಸಾಮರ್ಥ್ಯವನ್ನು ತಿಳಿಯುವ ಉದ್ದೇಶದಿಂದ ಪಾರಿವಾಳವನ್ನು ಶಬರಿಮಲೆಯಿಂದ ಹಾರಿ ಬಿಟ್ಟಿದ್ದಾರೆ.
4 ದಿನದಲ್ಲಿ ಗೂಡಿಗೆ ಮರಳಿದ ಪಾರಿ: 'ಪಾರಿವಾಳವನ್ನು ಹೊರ ಊರುಗಳಿಗೆ ಹಾರಿ ಬಿಡುವುದು ಸಾಮನ್ಯ. ಹೀಗೆ ಹಾರಾಟಕ್ಕೆ ಬಿಟ್ಟಾಗ ಕೆಲವೊಮ್ಮೆ ಗಿಡುಗ, ಹದ್ದಿನ ಬಾಯಿಗೆ ತುತ್ತಾಗುವುದು ಸಾಮಾನ್ಯ. ಆದರೆ ಈ ಪಾರಿವಾಳ ಮಾತ್ರ ಹಾರಿಬಿಟ್ಟ ನಾಲ್ಕು ದಿನಗಳ ಬಳಿಕ ತನ್ನ ಊರನ್ನು ಆ ಮೂಲಕ ತನ್ನ ಆವಾಸ ಸ್ಥಾನಕ್ಕೆ ತಲುಪಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ತರಬೇತಿ ಪಡೆದ ಪಾರಿವಾಳ ಮಾತ್ರ ಸರಿಯಾದ ದಾರಿಗೆ ಬರಲು ಸಾಧ್ಯವಾಗುತ್ತದೆ ಎನ್ನುವುದು ಪಕ್ಷಿ ಸಾಕಣೆದಾರ ವೆಂಕಟೇಶ್ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ:ನಾನೂ ನೀನೂ ಒಂದಾದ ಮೇಲೆ.. ಪಾರಿವಾಳಗಳ ಸರಸ-ಸಲ್ಲಾಪ!!
ಶಬರಿಮಲೆಯಿಂದ ಬಂದ ಪಾರಿವಾಳ ಕಂಡು ಮೂಕವಿಸ್ಮಿತರಾದ ಗ್ರಾಮಸ್ಥರು: ಡಿಸೆಂಬರ್ 30 ರಂದು ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಯಿಂದ ಪಾರಿವಾಳ ಹಾರಿ ಬಿಟ್ಟಿದ್ದರು. ಕೇರಳದಿಂದ ಸತತವಾಗಿ ನಾಲ್ಕು ದಿನಗಳ ಕಾಲ ಹಾರಾಟ ನಡೆಸಿದ ಪಾರಿವಾಳ ಮೇಗಳಹಟ್ಟಿ ಗ್ರಾಮದಲ್ಲಿರುವ ತನ್ನ ಗೂಡಿಗೆ ಮರಳಿ ಬಂದಿದೆ. ದೂರದ ಕೇರಳದಿಂದ ನೂರಾರು ಮೈಲಿ ಹಾರಾಟ ನಡೆಸಿಕೊಂಡು ಬಂದ ಪಾರಿವಾಳವನ್ನು ನೋಡಿದ ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ.
ಇದನ್ನೂ ಓದಿ: ಮೂಕ ರೋದನೆಗೆ ಮರುಗಿದ ಯುವಕರು.. ಗಾಳಿಪಟದ ದಾರದಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಣೆ
'ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಜೀವನವೇ ಸಾರ್ಥಕ ಎಂಬುವಷ್ಟು ನೆಮ್ಮದಿಯಾಗುತ್ತಾರೆ ಭಕ್ತರು. ಹೀಗಿರುವಾಗ ಪಾರಿವಾಳ ಅಯ್ಯಪ್ಪನ ಆಶೀರ್ವಾದ ಪಡೆದು ಪುನಃ ತವರಿಗೆ ಆಗಮಿಸಿದೆ' ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಆಂಧ್ರ, ತಮಿಳನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧಡೆಯಿಂದ ಶಬರಿಮಲೆಗೆ ಭಕ್ತರು ಆಗಮಿಸಿ ಸ್ವಾಮಿ ಅಯ್ಯಪ್ಪನ ಆಶೀರ್ವಾದ ಪಡೆಯುತ್ತಾರೆ. ಇದೀಗ ವೆಂಕಟೇಶ್ ಅವರು ಸಾಕಿದ್ದ ಪಾರಿವಾಳವೂ ಅಯ್ಯಪ್ಪನ ದರ್ಶನ ಪಡೆದು, ಅಲ್ಲಿಂದ ಹಾರಿಕೊಂಡು ತನ್ನ ನೆಲೆಗೆ ತಲುಪಿರುವುದು ಇಲ್ಲಿನ ಗ್ರಾಮಸ್ಥರಿಗೆ ಪವಾಡ ಎಂಬಂತೆ ಕಾಣುತ್ತಿದೆ.
ಇದನ್ನೂ ಓದಿ: ಪಾಕ್ನಿಂದ ಹಾರಿ ಬಂತು ಶಂಕಿತ ಬೇಹುಗಾರಿಕಾ ಪಾರಿವಾಳ... ಕೋಡ್ ವರ್ಡ್ ಹಿಂದೆ ಬಿದ್ದ ಪೊಲೀಸರು!