ಚಿತ್ರದುರ್ಗ: ನಾನು ಕೂಡ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದಲ್ಲಿ ಕ್ಯಾಸಿನೋ ನೋಡಲು ಹೋಗಿದ್ದೆ ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಇವತ್ತಿನಿಂದ ಇರೋದಲ್ಲ ಮೊದಲಿನಿಂದಲೂ ಇದೆ. ಅದು ಮಹಾರಾಷ್ಟ್ರದಿಂದ ಆರಂಭವಾಗಿ ಕರ್ನಾಟಕ್ಕೆ ಬಂದು ನಿಂತಿದೆ. ಈ ಡ್ರಗ್ಸ್ನನ್ನು ಬಡವರು ತೆಗೆದುಕೊಳ್ಳುವುದಿಲ್ಲ, ಬದಲಾಗಿ ದುಡ್ಡು ಇರುವಂತವರು ಹಾಗೂ ಶ್ರೀಮಂತರು ತೆಗೆದುಕೊಳ್ಳುತ್ತಾರೆ. ಈಗಾಗಲೇ ಡ್ರಗ್ಸ್ ಪ್ರಕರಣಗದಲ್ಲಿ ಕೆಲವರನ್ನು ಬಂಧಿಸಿದ್ದು, ನಮ್ಮ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ಪರ ಬ್ಯಾಟ್ ಬೀಸಿದರು.
ನಟಿ ಸಂಜನಾ ಗಲ್ರಾನಿ ಹಾಗು ಶಾಸಕ ಜಮೀರ್ ಅಹ್ಮದ್ ಖಾನ್ಗೆ ಸಂಬಂಧ ಇದೆ ಎಂದು ಹೇಳಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸದ ಅವರು, ಸಿನಿಮಾ ನಟ, ನಟಿಯರಿಗೆ ರಾಜಕೀಯದವರ ಪರಿಚಯ ಇರ್ಬಾರದಾ..?, ಅದ್ರು ಜಮೀರ್ ಅಹ್ಮದ್ ಮಾಡಿದ್ರು ತಪ್ಪೇ, ನಾನು ಮಾಡಿದ್ರೂ ತಪ್ಪೇ, ಜಮೀರ್ ಅಹ್ಮದ್ ಅವರ ಹೆಸರು ಬಂದ ತಕ್ಷಣ ಅವರು ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವುದಕ್ಕಾಗುತ್ತಾ..? ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಸರ್ಕಾರದ ಮೇಲೆ ಯಾರೇ ಎಷ್ಟೇ ಒತ್ತಡ ಹಾಕಿದರೂ ಸರ್ಕಾರ ಹಿಂದಕ್ಕೆ ಸರಿ ಕೂಡದು. ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅತಂಹವರನ್ನು ಮಟ್ಟ ಹಾಕ್ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.