ಚಿತ್ರದುರ್ಗ: ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿರುವ ಕುರಿತು ಈಟಿವಿ ಭಾರತ ವರದಿ ಬಿತ್ತರಿಸುತ್ತಿದಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇಂಗಳದಾಳ್ ಗ್ರಾಮಕ್ಕೆ ಭೇಟಿ ನೀಡಿ ಮಣ್ಣು ಸರಬರಾಜು ಮಾಡಿದ ಕಂಪನಿಯ ಎಂಡಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಪಿಎಂಸಿ ಕಂಪನಿಯಿಂದ ಪರವಾನಗಿ ಪಡೆದು ರಾಷ್ಟ್ರೀಯ ಹೆದ್ದಾರಿ 4ರ ಕಾಮಗಾರಿಗೆ ಕೆಆರ್ಡಿ ಇನ್ಫಾಟೆಕ್ ಎಂಬ ಕಂಪನಿ ಕಳೆದ 1 ತಿಂಗಳಿನಿಂದ ಇಂಗಳದಾಳ್ ಹಾಗೂ ಲಂಬಾಣಿಹಟ್ಟಿ ಗ್ರಾಮದ ರಸ್ತೆಯಲ್ಲಿ ಲಾರಿಗಳ ಮೂಲಕ ದಿನವಿಡೀ ಟನ್ಗಟ್ಟಲೇ ಮಣ್ಣು ಸರಬರಾಜು ಮಾಡುತ್ತಿತ್ತು.
60 ಟನ್ ಲಾರಿಗಳು ಎಂಡಿಆರ್ ರಸ್ತೆಯ ಮೂಲಕ ಸಂಚಾರ ನಡೆಸಿದ ಪರಿಣಾಮ ಇತ್ತೀಚೆಗಷ್ಟೇ ಕಾಮಗಾರಿ ಪೂರ್ಣವಾಗಿದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದರು. ಈ ಕುರಿತು ಎರಡು ದಿನಗಳ ಹಿಂದಷ್ಟೇ ಈಟಿವಿ ಭಾರತ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ: ಲೋಡ್ಗಟ್ಟಲೇ ಮಣ್ಣು ಸಾಗಿಸಿ ರಸ್ತೆ ಹದಗೆಡಿಸಿದ ಆರೋಪ : ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಗುಂಡಿ ಮುಚ್ಚಿದ ರಸ್ತೆ ನೋಡಿ ಸಿಡಿಮಿಡಿಗೊಂಡ ಶಾಸಕರು
ಮಣ್ಣು ಸರಬರಾಜಿನಿಂದ 5 ಕಿ.ಮೀ. ಎಂಡಿಆರ್ ರಸ್ತೆ ಹದಗೆಟ್ಟಿದೆ. ರಸ್ತೆ ಸರಿಪಡಿಸದೆ ಹೋದರೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇತ್ತ ಕೆಆರ್ಡಿ ಇನ್ಫಾಟೆಕ್ ಕಂಪನಿ ಕೆಲ ಗುಂಡಿ ಮುಚ್ಚಿ ಕೈತೊಳೆದುಕೊಂಡಿದೆ ಎಂದು ಶಾಸಕರು ಆರೋಪಿಸಿದ್ದಲ್ಲದೆ, ತಕ್ಷಣವೇ ರಸ್ತೆ ಸರಿಪಡಿಸಬೇಕು ಎಂದು ಎಚ್ಚರಿಸಿದರು.
ತಪ್ಪೊಪ್ಪಿಕೊಂಡ ಕಂಪನಿ ಎಂಡಿ
ಬಳಿಕ ಮಾತನಾಡಿದ ಕೆಆರ್ಡಿ ಇನ್ಫಾಟೆಕ್ ಕಂಪನಿ ಎಂಡಿ ಚಂದ್ರಶೇಖರ್, ನಾವು ಪಿಎನ್ಸಿ ಕಂಪನಿಯ ಪರವಾನಗಿ ಪಡೆದು ಮಣ್ಣು ತೆಗೆದುಕೊಂಡಿದ್ದೇವೆ. ಅಲ್ಲದೆ ಅರಣ್ಯ ಹಾಗೂ ಇತರೆ ಇಲಾಖೆಗಳ ಅನುಮತಿ ಪಡೆದುಕೊಂಡಿದ್ದೇವೆ. ರಸ್ತೆ ಹದಗೆಟ್ಟಿದೆ. ಈಗಾಗಲೇ ಶಾಸಕರು ನಮ್ಮ ಗಮನಕ್ಕೆ ತಂದಿದ್ದಾರೆ. ಮೇಲಾಧಿಕಾರಿಗಳೊಂದಿಗೆ ಮಾತನಾಡಿ ರಸ್ತೆ ಅಭಿವೃದ್ಧಿ ಮಾಡುತ್ತೇವೆ. ತಪ್ಪಾಗಿದ್ದಕ್ಕೆ ಶಾಸಕರಿಗೆ ಕ್ಷಮೆಯಾಚಿಸುತ್ತೇನೆ ಎಂದರು.
ಇದನ್ನೂ ಓದಿ: ಈಟಿವಿ ಭಾರತ ಫಲಶೃತಿ : ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ