ಚಿತ್ರದುರ್ಗ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಯಾದ ಕೋಟೆನಾಡಿನ ನಾಯಕನಟ್ಟಿ ಅದ್ಧೂರಿ ರಥೋತ್ಸವಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ತಲ ತಲಾಂತರದಿಂದ ನಡೆದುಕೊಂಡ ಬಂದ ಜಾತ್ರೆ ಕೊರೊನಾ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳಿಗೆ ಸರ್ಕಾರ ರದ್ದು ಪಡಿಸಿರುವುದು. ಮಾನವ ಕುಲಕ್ಕೆ ಅಪಾಯ ತರುವ ಮುನ್ಸೂಚನೆ ಎಂದು ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಗ್ರಾಮದಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳ ಕೊನೆಯ ವಾರ ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ನಡೆಸಲಾಗುತ್ತದೆ. ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯದ ಲಕ್ಷಾಂತರ ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗುವುದು ವಾಡಿಕೆ. ಕಳೆದ ವರ್ಷ ತಿಪ್ಪೇರುದ್ರಸ್ವಾಮಿ ಜಾತ್ರೆ ಮುಗಿದ ಮಾರನೆ ದಿನವೇ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿತ್ತು. ಬಳಿಕ ಎಲ್ಲ ಧಾರ್ಮಿಕ ಕಾರ್ಯಗಳಿಗೆ, ಜಾತ್ರೆ, ರಥೋತ್ಸವ ಗಳಿಗೆ ನಿರ್ಬಂಧ ಹೇರಿತ್ತು. ಆದರೆ, ಈ ವರ್ಷ ಜಾತ್ರೆ ಸಮೀಪಿಸುತ್ತಿದ್ದಂತೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ಸರ್ಕಾರ ಧಾರ್ಮಿಕ ಕಾರ್ಯ, ಜಾತ್ರೆ, ರಥೋತ್ಸವಗಳ ಮೇಲೆ ಹಾಕಿದ್ದ ನಿರ್ಬಂಧಗಳನ್ನು ತೆರವುಗೊಳಿಸಿದೆ ಆದರೆ, ಮತ್ತೆ ಜಿಲ್ಲಾಡಳಿತ ಜಾತ್ರೆ ಸರಳವಾಗಿ ಆಚರಣೆ ಮಾಡುವಂತೆ ಆದೇಶ ನೀಡಿರುವುದು ಭಕ್ತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಕಳೆದ ವಾರವಷ್ಟೇ, ದೇವಾಲಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಕೊರೊನಾ ವೈರಸ್ ರೂಪಾಂತರ ಆತಂಕದ ಕಾರಣ ನಾಯಕನಟ್ಟಿ ತಿಪ್ಪೇರುದ್ರ ಸ್ವಾಮಿ ಅದ್ಧೂರಿ ಬ್ರಹ್ಮ ರಥೋತ್ಸವ ನಿಷೇಧ ಮಾಡಲಾಗಿದೆ. ತಾಲೂಕಿನ ಸೀಮಿತ ಜನರು ಸೇರಿ ಸಣ್ಣ ರಥೋತ್ಸವದೊಂದಿಗೆ ಸರಳವಾಗಿ ಜಾತ್ರೆ ಮಾಡುವಂತೆ ಡಿಸಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಓದಿ : ಈರುಳ್ಳಿ ಬೆಲೆ ಕುಸಿತ: ಸಂಕಷ್ಟದಲ್ಲಿ ಈರುಳ್ಳಿ ಬೆಳೆದ ರೈತ
ತಲ ತಲಾಂತರದಿಂದ ನಡೆದುಕೊಂಡ ಬಂದ ರಥೋತ್ಸವಕ್ಕೆ ಜಿಲ್ಲಾಡಳಿತ ತಡೆಯುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇತ್ತ ಬ್ರಹ್ಮ ರಥೋತ್ಸವ ನಿಂತರೆ ಮಾನವ ಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ, ಮಳೆ ಬೆಳೆ ಸರಿಯಾಗಿ ಆಗುವುದಿಲ್ಲ ಎನ್ನುವುದು ಭಕ್ತರ ವಾದವಾಗಿದೆ. ಇತ್ತ ಜಿಲ್ಲಾಡಳಿತ ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಮಾಡುವುದು ಸರಿಯಲ್ಲ, ಸರ್ಕಾರ ಎಲ್ಲ ನಿಯಮಗಳನ್ನ ತೆರವುಗೊಳಿಸಿದೆ. ಈಗಾಗಲೇ ಪಬ್, ಮಾಲ್ಗಳ, ಬಾರ್ಗಳ ಎಷ್ಟೇ ಜನ ಸಂಖ್ಯೆ ಸೇರಿದರೂ, ಜಿಲ್ಲಾಡಳಿತ ನಿರ್ಬಂಧನೆ ಹೇರುವುದಿಲ್ಲ. ಆದ್ರೆ ಜಾತ್ರೆ ವಿಚಾರವಾಗಿ ಮಲತಾಯಿ ಧೋರಣೆ ಸರಿಯಲ್ಲ. ಬ್ರಹ್ಮ ರಥೋತ್ಸವ ಅವಕಾಶ ನೀಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಹಿಂದಿನ ಕಾಲದಿಂದಲೂ ಸುಸೂತ್ರವಾಗಿ ನಡೆದುಕೊಂಡ ಬಂದ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಜಿಲ್ಲಾಡಳಿತ ಕೊಕ್ಕೆ ಹಾಕಿ, ಸರಳವಾಗಿ ಆಚರಿಸುವಂತೆ ಹೇಳಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ನಿಯಮ ಸಡಿಲಗೊಳಿಸಿ ಅದ್ಧೂರಿ ಜಾತ್ರೆಗೆ ಅವಕಾಶ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ.