ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆ ಮತ್ತು ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಈಗಾಗಲೇ ತೀರ್ಮಾನಿಸಿರುವ ಘೋಷಣೆ ಅವೈಜ್ಞಾನಿಕವಾಗಿದ್ದು, ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರು ತಿಳಿಸಿದ್ದಾರೆ.
ಈ ಕುರಿತು ರಂಭಾಪುರಿ ಮಠದಲ್ಲಿ ಮಾತನಾಡಿದ ಅವರು, ಭದ್ರಾ ಹುಲಿ ಯೋಜನೆಗಾಗಿ 1974 ರಲ್ಲಿ 462 ಚ.ಕಿಲೋ ಮೀಟರ್ ಘೋಷಿಸಲಾಗಿತ್ತು. ಈಗ ಮತ್ತೆ ಘೋಷಿಸಲು ಹೊರಟಿರುವ ವ್ಯಾಪ್ತಿ ಅವೈಜ್ಞಾನಿಕವಾಗಿದ್ದು, ಇದರ ಕುರಿತು ಯಾವುದೇ ಗ್ರಾಮದ ಜನತೆಗಾಗಲಿ, ಸಮಿತಿಗಳಿಗಾಗಲಿ ಹಾಗೂ ಗ್ರಾಮ ಸಭೆಗಳ ಸಮಿತಿಗೆ ಗೊತ್ತಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ನಂತರ ಮಾತನಾಡಿದ ಅವರು, ಎನ್.ಆರ್.ಪುರ ತಾಲೂಕಿನ ಹತ್ತಾರು ಗ್ರಾಮಗಳಿಗೆ ಈ ಯೋಜನೆಯಿಂದ ತೊಂದರೆಯಾಗುವುದಲ್ಲದೇ ಸುಮಾರು 25 ದೇವಾಲಯಗಳು, 3 ಚರ್ಚ್ ಮತ್ತು 4 ಮಸೀದಿಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಈ ಎರಡು ಯೋಜನೆಗಳಿಂದ ತಾಲೂಕು ಕಣ್ಮರೆಯಾಗುವ ದುಸ್ಥಿತಿಗೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಮತ್ತು ಭದ್ರಾ ಹುಲಿ ಯೋಜನೆಯಿಂದ ಈಗಾಗಲೇ ನಿರಾಶ್ರಿತರಾದ ಕುಟುಂಬಗಳು ಮತ್ತೆ ಈ ಯೋಜನೆಗೆ ಒಳಪಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದು, ರೈತರ ಮೂಲ ಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಕೃಷಿ ಚಟುವಟಿಕೆ, ಭದ್ರಾ ನದಿ ನೀರಿನ ಬಳಕೆ, ಜಾನುವಾರು ಸಂರಕ್ಷಣೆ, ರಸಗೊಬ್ಬರ ಬಳಕೆ, ಧಾರ್ಮಿಕ ಉತ್ಸವ, ಜಾತ್ರೆ ಮತ್ತು ರಾತ್ರಿ ಸಂಚಾರ ಇವೆಲ್ಲವುಗಳಿಗೂ ಸಮಸ್ಯೆಯಾಗುತ್ತದೆ ಎಂದರು.
ಆದ್ದರಿಂದ ಈ ಎರಡು ಯೋಜನೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಜಾರಿಗೆ ತರಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ ಶ್ರೀಗಳು ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.