ಚಿಕ್ಕಮಗಳೂರು: ಕಾಫಿ ತೋಟದಲ್ಲಿರುವ ಕಾರ್ಮಿಕರಿಗೆ ಸರಿಯಾದ ಸಂಬಳ ನೀಡದೇ, ಬ್ಯಾಂಕಿನಲ್ಲಿ ಪಡೆದ ಕೋಟ್ಯಂತರ ರೂ. ಸಾಲ ಮರು ಪಾವತಿ ಮಾಡದೇ, ಕಾಫಿ ತೋಟದ ಮಾಲೀಕ ಊರು ಬಿಟ್ಟಿದ್ದಾನೆ. ಈಗ ಸಾಲ ನೀಡಿದ ಬ್ಯಾಂಕ್ ಕಾಫಿ ತೋಟವನ್ನು ಸೀಜ್ ಮಾಡಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಗೆ ಬಂದಿರುವ ಘಟನೆ ಜಿಲ್ಲೆಯ ಹಿರೇಕೊಳಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಜಿಲ್ಲೆಯ ಹಿರೇಕೊಳಲೆಯ ವಾಟೇಖಾನ್ ಎಸ್ಟೇಟ್ ಮಾಲೀಕ ರಮೇಶ್ ರಾವ್ ಯೂನಿಯನ್ ಬ್ಯಾಂಕ್ ನಲ್ಲಿ ಸಾಲ ಪಡೆದು ಊರು ಬಿಟ್ಟಿದ್ದಾನೆ. ಬ್ಯಾಂಕ್ ಎಷ್ಟೇ ನೋಟಿಸ್ ನೀಡಿದ್ರೂ ಆತ ಮಾತ್ರ ತಲೆಕೆಡಿಸಿಕೊಂಡಿಲ್ಲ. ನೋಡೋ ತನಕ ನೋಡಿದ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೂಲಕ ಕಾಫಿ ಎಸ್ಟೇಟ್ ಜಪ್ತಿ ಆದೇಶ ತಂದು ಎಸ್ಟೇಟ್ ಮೇಲೆ ದಾಳಿ ನಡೆಸಿದ್ದಾರೆ.
ಕಂಗಲಾದ ಕಾರ್ಮಿಕರು: ಬಿಗಿ ಪೊಲೀಸ್ ಬಂದ್ ಬಸ್ತ್ ಜೊತೆ ಕಾಫಿ ಎಸ್ಟೇಟ್ ಗೆ ದಾಳಿ ಮಾಡಿದ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನ ಕಂಡ ಕಾರ್ಮಿಕರು ಒಮ್ಮೆಲೆ ಕಂಗಲಾಗಿ ಹೋಗಿದ್ದಾರೆ. ನೀವು ಈ ಕೂಡಲೇ ಮನೆ ಖಾಲಿ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದಾಗ ಕಾರ್ಮಿಕರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.
ಬ್ಯಾಂಕ್ ಅಧಿಕಾರಿಗಳು ಸಾಲ ತೀರಿಸಿಲ್ಲ ಅಂತಾ ಕಾಫಿ ತೋಟ, ಬಂಗಲೆ, ಮನೆ, ಎಲ್ಲವನ್ನೂ ಜಪ್ತಿ ಮಾಡಿದ್ದಾರೆ. ಎಲ್ಲ ಕಡೆಗಳಲ್ಲೂ ಸೂಚನೆ ಪತ್ರ ಅಂಟಿಸಿದ್ದಾರೆ. ಬ್ಯಾಂಕಿಗೆ ಸಾಲ ತೀರಿಸದೇ ಇದ್ದದ್ದು ಮಹಾ ಅಪರಾಧ. ಆದರೆ, ನಮಗೆ ಕಾಫಿ ತೋಟದ ಮಾಲೀಕ ಲಕ್ಷಾಂತರ ರೂಪಾಯಿ ಬಾಕಿ ಹಣ ನೀಡಬೇಕು. ಬ್ಯಾಂಕ್ನವರು ನೀವು ಹೋಗಿ ಅಂತಾ ಹೆದರಿಸುತ್ತಿದ್ದಾರೆ. ನಮಗೂ ತೋಟದ ಮಾಲೀಕ ಲಕ್ಷಾಂತರ ಹಣ ನೀಡಬೇಕು. ಹಲವಾರು ವರ್ಷಗಳಿಂದ ಸಂಬಳವನ್ನೂ ಸಹ ಪಡೆದಿಲ್ಲ. ನಮಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ. ಈ ರೀತಿ ನೀವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ಓದಿ: ‘ಚೌಡಮ್ಮನ ಮೇಲೆ ಆಣೆ ಮಾಡ್ತೀನಿ ನಾನು ವೆಂಕಟ ರೆಡ್ಡಿಗೆ ವೋಟು ಹಾಕಿದ್ದೆ’: ವೈರಲ್ ಆಯ್ತು ಗ್ರಾ.ಪಂ ಸದಸ್ಯರ ವಿಡಿಯೋ
ಕಾರ್ಮಿಕರು ಎಷ್ಟೇ ಬೇಡಿಕೊಂಡರೂ, ಕೋರ್ಟ್ ಆರ್ಡರ್ ಆಗಿದೆ ಅನ್ನೋದು ಅಧಿಕಾರಿಗಳ ಮಾತು. ಆದರೇ ಇಷ್ಟು ವರ್ಷಗಳ ಕಾಲ ಗಾಣದ ಎತ್ತುಗಳಂತೆ ದುಡಿದ ಕಾರ್ಮಿಕರ ಸ್ಥಿತಿಯಂತೂ ಚಿಂತಾಜನಕವಾಗಿದೆ.