ಚಿಕ್ಕಮಗಳೂರು: ಜಿಲ್ಲೆಯಲ್ಲಿ ತುರ್ತು ಸಂದರ್ಭ ರಕ್ತ ನಿಧಿಗಳಲ್ಲಿ ರಕ್ತದ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ರಕ್ತದಾನ ಮಾಡಿದ್ರು.
ಬಸವನಹಳ್ಳಿ ಮುಖ್ಯ ರಸ್ತೆಯ ರಂಗಣ್ಣನವರ ಛತ್ರದಲ್ಲಿ ಚಿಕ್ಕಮಗಳೂರು ಯುವಕರ ಸಂಘದಿಂದ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ. ಟಿ. ರವಿ ನಗರದಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ರಕ್ತದಾನ ಶಿಬಿರ ಮಾಡುವ ಸಂದೇಶ ಬಂದಿತ್ತು. ಈ ಹಿನ್ನೆಲೆ ಜಿಲ್ಲೆಯ ಯುವಕ ಸಂಘವು ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ, ಶಿಬಿರವನ್ನು ಏರ್ಪಡಿಸಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ರಕ್ತದಾನಿಗಳು ಭಾಗಿಯಾಗಿರುವುದು ಖುಷಿಯಾಗಿದೆ ಎಂದರು.
ರಕ್ತದಾನ ಮಹಾದಾನವಾಗಿದ್ದು, ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ರಕ್ತದಾನ ಶಿಬಿರವನ್ನು ಏರ್ಪಡಿಸುವುದು ಒಳಿತು. ಸಂಕಷ್ಟದ ಸಂದರ್ಭಗಳಲ್ಲಿ ಇಂತಹ ಶಿಬಿರಗಳು ಅನುಕೂಲವಾಗಲಿದ್ದು, ಯಾವುದೇ ಸಮಯದಲ್ಲೂ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ಹೇಳಿದರು. ಈ ರಕ್ತಧಾನ ಶಿಬಿರದಲ್ಲಿ 83 ಕ್ಕೂ ಅಧಿಕ ಜನರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ರು.