ಚಿಕ್ಕಮಗಳೂರು : ಹಳೆ ತಹಶೀಲ್ದಾರ್ ಲಾಗಿನ್ ಐಡಿ ಬದಾಲವಣೆ ಮಾಡಿದೆ, ತಮಗೆ ಬೇಕಾದವರಿಗೆ ಜಮೀನು ಮಂಜೂರು ಮಾಡಿದ್ದಾರೆ ಎನ್ನುವ ಆರೋಪ ಕಡೂರು ತಾಲೂಕಿನ ತಹಶೀಲ್ದಾರ್ ವಿರುದ್ಧ ಕೇಳಿಬಂದಿದೆ.
ಈ ರೀತಿ ಅಕ್ರಮವಾಗಿ ಜಮೀನು ಮಂಜೂರು ಮಾಡಿದ್ದರಿಂದ ಇಬ್ಬರೂ ರೆವಿನ್ಯು ಇನ್ಸ್ಪೆಕ್ಟರ್ ಹಾಗೂ ಓರ್ವ ಗ್ರಾಮ ಲೆಕ್ಕಾಧಿಕಾರಿ ಬಲಿಯಾಗಿದ್ದಾರೆ. ಜಮೀನು ಪಡೆದವರು 1994 ರಲ್ಲಿ ಫಾರಂ 53 ಅರ್ಜಿಯನ್ನೇ ಹಾಕಿಲ್ಲ. ಆದರೂ ಜಮೀನಿನ ಸಾಗುವಳಿ ಚೀಟಿ ಮಾತ್ರ ಬಂದಿದೆ. ಇದು ಭೂಮಿ ಕೇಂದ್ರದಲ್ಲಿ ನಡೆದಿರುವ ದೊಡ್ಡ ಗೋಲ್ ಮಾಲ್ ಎಂದು ಸಾರ್ವಜನಿಕರು ದೂರಿದ್ದಾರೆ.
ಕಡೂರು ತಾಲೂಕಿನಲ್ಲಿ ಉಮೇಶ್ ಎಂಬುವರು ಹಾಲಿ ತಹಶೀಲ್ಡಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೇ ಹೊಸದಾಗಿ ತಹಶೀಲ್ದಾರ್ ಆಗಿ ಬಂದ ಮೇಲೆ ಈ ಹಿಂದೆ ಕಡೂರಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದವರ ಲಾಗಿನ್ ಐಡಿ ಕ್ಲೋಸ್ ಮಾಡಿ, ಕಾನೂನಿನ ಪ್ರಕಾರ ಇವರ ಲಾಗಿನ್ನಲ್ಲಿ ಕೆಲಸ ಮಾಡಬೇಕು. ಆದರೇ ಇವರು ಹಳೇ ತಹಶೀಲ್ದಾರ್ ಐಡಿಯನ್ನ ಕ್ಲೋಸ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬದಲಾಗಿ ಹಳೇ ಐಡಿ ಬಳಸಿ, ಕಡೂರಿನ ಎಮ್ಮೆದೊಡ್ಡೆ ಗ್ರಾಮದಲ್ಲಿ ತನ್ನ ಅಜ್ಜ-ಅಜ್ಜಿಗೆ ತಲಾ 4 ಎಕರೆ 38 ಗುಂಟೆ ಹಾಗೂ ಕಡೂರಿನ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಗಳಿಗೆ ಬೆಳ್ಳಿಗುತ್ತಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನ ಅಕ್ರಮವಾಗಿ ಮಾಡಿಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ತುಮಕೂರು ಜಿಲ್ಲೆಯವರು. ಅಲ್ಲಿಂದ ಬಂದಿರೋ ಅಧಿಕಾರಿಗಳು ಅವರ ಹೆಸರಿಗೆ ಹೇಗೆ ಜಮೀನು ಮಾಡಿಕೊಟ್ಟಿದ್ದಾರೆ ಎಂಬ ಅನುಮಾನ ಕಾಡಲು ಪ್ರಾರಂಭವಾಗಿದೆ. ವಿಷಯ ಹೊರಗೆ ಬರುತ್ತಿದ್ದಂತೆಯೇ ಸ್ಥಳೀಯ ಕೆಲವರು ದಾಖಲೆಗಳನ್ನು ಕಲೆ ಹಾಕಲು ಮುಂದಾಗಿದ್ದಾರೆ. ಆದರೇ ಭೂಮಿ ಕೇಂದ್ರದ ಕಚೇರಿಯಲ್ಲಿ ದಾಖಲೆಗಳೇ ಡಿಲಿಟ್ ಆಗಿದ್ದು ಇದು ಮತ್ತಷ್ಟು ಅನುಮಾನ ಮೂಡಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಓದಿ : ಕಾಂಗ್ರೆಸ್ ಪ್ರತಿಭಟನೆ: 'ಒಂದು ದೇಶ, ಒಂದು ಚುನಾವಣೆ' ಮೇಲಿನ ಚರ್ಚೆ ಅಪೂರ್ಣ
ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ನಡೆಸುತ್ತಿರುವ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನಾಗರಾಜ್ ಪ್ರಾಥಮಿಕ ಹಂತದ ತನಿಖೆ ನಡೆಸಿ ತಾತ್ಕಾಲಿಕ ವರದಿ ನೀಡಿದ್ದಾರೆ. ಅದರಲ್ಲಿ ತಹಶೀಲ್ದಾರ್ ಉಮೇಶ್ ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ಕರ್ತವ್ಯಲೋಪ ಕಂಡು ಬರುತ್ತಿದೆ ಎಂದು ವರದಿ ನೀಡಿದ್ದಾರೆ. ಆದರೆ, ಪ್ರಕರಣದಲ್ಲಿ ಬಲಿಯಾಗಿರೋದು ಮಾತ್ರ ಇಬ್ಬರು ರೆವಿನ್ಯೂ ಇನ್ಸ್ಪೆಕ್ಟರ್ ಹಾಗೂ ಓರ್ವ ಗ್ರಾಮ ಲೆಕ್ಕಾಧಿಕಾರಿ.1994 ನೇ ಇಸವಿಯ ಫಾರಂ 53 ಅಡಿ ಸ್ಥಳಿಯರು ಹಾಕಿದ ಅರ್ಜಿಯಲ್ಲಿ ಜಮೀನು ಮಂಜೂರು ಆಗಿರುವವರ ಹೆಸರೇ ಇಲ್ಲ. ಕೈ ಬರಹದಲ್ಲಿ ಹೆಸರನ್ನ ಸೇರಿಸಿದ್ದಾರೆಂದು ಆರೋಪ ಮಾಡುತ್ತಿರುವ ಸ್ಥಳೀಯರು ಈ ಕುರಿತು ಗಂಭೀರ ತನಿಖೆ ಆಗಬೇಕು ಎಂದೂ ಆಗ್ರಹಿಸುತ್ತಿದ್ದಾರೆ.