ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದ್ದ 101 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ನಂದಿ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೀತಿಸಂಹಿತೆ ಜಾರಿ ಹಿನ್ನೆಲೆ ತಾಲೂಕಿನ ದೊಡ್ಡಮರಳಿ ಬಳಿ ಚೆಕ್ ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದವಾಗಿ ಬಂದ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ AP-03-CD-3479 ಎಂಬ ವಾಹನದಲ್ಲಿ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಇನ್ನೂ ವಾಹನ ಪರಿಶೀಲನೆ ನಡೆಸಿದ ಭದ್ರತಾ ಸಿಬ್ಬಂದಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಕಾರು ನಿಲ್ಲಿಸದೇ ಪೇದೆಯೊಬ್ಬರಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಕಾರನ್ನು ಹಿಂಬಾಲಿಸಿಕೊಂಡ ಹೋದಾಗ ರಾಷ್ಟ್ರೀಯ ಹೆದ್ದಾರಿಯ ನಂದಿ ಕ್ರಾಸ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರನ್ನ ಪರಿಶೀಲನೆ ನಡೆಸಿದಾಗ ಸುಮಾರು 7 ಚೀಲಗಳಲ್ಲಿ 101 ಕೆಜಿಯಷ್ಟು ತೂಕವಿರುವ ಶ್ರೀಗಂಧ ಮರದ ತುಂಡಗಳು ಪತ್ತೆಯಾಗಿದ್ದು ಅದರ ಒಟ್ಟು ಮೌಲ್ಯ 6.40 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ.